ಗಂಗಾವತಿ: ನರೇಗಾ ಯೋಜನೆಯಡಿ ಕೆಲಸ ಮತ್ತು ಬಾಕಿ ಕೂಲಿ ನೀಡುವಂತೆ ವೆಂಕಟಗಿರಿ ಗ್ರಾಪಂ ವ್ಯಾಪ್ತಿಯ ಕೂಲಿಕಾರ್ಮಿಕರು ಸೋಮವಾರ ಸಿಐಟಿಯು-ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ತಾಪಂ ಕಚೇರಿವರೆಗೆ ಪಾದಯಾತ್ರೆ ಕೈಗೊಂಡರು.
ಪಾದಯಾತ್ರೆಯಲ್ಲಿ ವೆಂಕಟಗಿರಿ, ಬಸಾಪಟ್ಟಣ ಮತ್ತು ದಾಸನಾಳ ಕೂಲಿಕಾರರು ಭಾಗವಹಿಸಿದ್ದರು. ತಾಲೂಕಿನ ವಡ್ಡರಹಟ್ಟಿಗೆ ಬರುತ್ತಿದ್ದಂತೆ ತಾಪಂ ಎಡಿ ನಾಗೇಶ ಕುರ್ಡಿ ಹಾಗೂ ಅಧಿಕಾರಿಗಳು ಆಗಮಿಸಿ, ಕಾರ್ಮಿಕರ ಮನವೊಲಿಸಿದರು. ಬಾಕಿ ಕೂಲಿ ಮತ್ತು ಹೊಸ ಕೆಲಸ ನೀಡುವ ಭರವಸೆ ನೀಡಿದ್ದರಿಂದ ಪಾದಯಾತ್ರೆ ಕೈಬಿಡಲಾಯಿತು.
ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಮಾತನಾಡಿ, ಗುಳೆ ತಪ್ಪಿಸಲು ನರೇಗಾ ಯೋಜನೆ ಜಾರಿಗೊಳಿಸಿದರೂ ಕೆಲಸ ಮಾಡಿದ ಕೂಲಿಗಾಗಿ ಹೋರಾಟ ಮಾಡುವ ಸ್ಥಿತಿ ಬಂದಿದೆ ಎಂದರು. ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಶಿವಣ್ಣ ಬೆಣಕಲ್ ಮಾತನಾಡಿ, ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ನೀಡಿಲ್ಲ, ಹೊಸ ಕೆಲಸಕ್ಕೂ ಅವಕಾಶ ನೀಡುತ್ತಿಲ್ಲ. ಧ್ವನಿ ಎತ್ತುವ ಕೂಲಿಕಾರರನ್ನು ದೂರವಿಡುವ ಕೆಲಸವಾಗುತ್ತಿದೆ. ತಾಂತ್ರಿಕ ಸಮಸ್ಯೆ ನೆಪದಲ್ಲಿ ಕಾಲಹರಣ ಮಾಡುತ್ತಿದ್ದು, ಕೆಲಸ ಮಾಡುವ ಜಾಗದಲ್ಲಿ ಮೂಲ ಸೌಕರ್ಯ ಒದಗಿಸುತ್ತಿಲ್ಲ ಎಂದು ದೂರಿದರು. ವಿವಿಧ ಸಂಘಟನೆ ಪದಾಧಿಕಾರಿಗಳಾದ ಕೆ.ಹುಸೇನಪ್ಪ, ಶ್ರೀನಿವಾಸ ಹೊಸಳ್ಳಿ, ಮಂಜುನಾಥ ಡಗ್ಗಿ, ಶಿವಕುಮಾರ, ಮುತ್ತಣ್ಣ ದಾಸನಾಳ್ ಇತರರಿದ್ದರು.