ಬೆಳಗಾವಿ: ನರೇಗಾ ಕೂಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚಿಸಿದರು. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ದೇಸೂರ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಸುಮಾರು 350ಕ್ಕೂ ಹೆಚ್ಚಿನ ಮಹಿಳೆಯರೊಂದಿಗೆ ಸಂವಾದ ನಡೆಸಿದರು.
ನರೇಗಾ ಕೂಲಿ ಕಾರ್ಮಿಕರ ಆರೋಗ್ಯದ ಬಗ್ಗೆ ವಿಚಾರಿಸಿದರು. ಕೆಲಸದ ಸ್ಥಳದಲ್ಲಿ ಎದುರಾಗುತ್ತಿರುವ ತೊಂದರೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಈ ಪ್ರದೇಶದಲ್ಲಿ ಭೂಮಿ ಗಟ್ಟಿಯಾಗಿರುವುದರಿಂದ 3 ಅಡಿ ಬದಲಾಗಿ 2 ಅಡಿಗೆ ಅಗೆತ ಸೀಮಿತಗೊಳಿಸಬೇಕು ಎಂದ ಅವರು, ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇಟ್ಟಿಗೆಗಳ ಬಟ್ಟಿಗೆ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು. ದೇಸೂರ ಗ್ರಾಪಂ ಉಪಾಧ್ಯಕ್ಷೆ ಸ್ನೇಹಾ ಕುಂಬಾರ, ಸಂತೋಷ ಮರಗಾಲಿ, ಸತೀಶ ಚವ್ಹಾಣ, ಗಣಪತ್ ಪಾಟೀಲ, ಸಂಕೇತ ಪಾಟೀಲ, ವಿದ್ಯಾ ಮನವಾಡಕರ್, ನಿಖಿತಾ ಸುತಾರ, ಕವಿತಾ ಗುರವ, ಭರಮಾ ಸುತಾರ, ಶೋಭಾ ನಂದ್ಯಾಳಿ ಇತರರು ಇದ್ದರು.