ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ವೇದಾಂತಾಚಾರ್ಯ ಶ್ರೀ ಮಂಜುನಾಥಭಾರತಿ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಭೇಟಿ ವೇಳೆ ಸುಮಾರು 30 ನಿಮಿಷಕ್ಕೂ ಅಧಿಕ ಕಾಲ ನಡೆದ ಮಾತುಕತೆಯಲ್ಲಿ ಈ ಇಬ್ಬರು ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ ಮತ್ತು ಹಲವು ವಿಚಾರಗಳ ಚರ್ಚೆ ನಡೆಸಿದ್ದಾರೆ.
ಹಲವು ವಿಚಾರಗಳ ಬಗ್ಗೆ ಚರ್ಚೆ
ಈ ಹಿಂದೆ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿಯವರು ಕಾಶಿಯಲ್ಲಿ ಸಂಸ್ಕೃತ ಅಧ್ಯಯನದ ವೇಳೆ ಮಾಡಿದ ಭೇಟಿ ಹಾಗೂ ಶಂಕರ ವೇದಾಂತ ಆಚಾರ್ಯ ಪರೀಕ್ಷೆಯಲ್ಲಿ ಎರಡು ಚಿನ್ನದ ಪದಕ ಗಳಿಸಿ ಉತ್ತೀರ್ಣರಾಗಿರುವ ಕುರಿತು ಮಾತನಾಡಿದ್ದಾರೆ.
ಹಾಲಿ ಪೀಠಾಧಿಕಾರಿಯಾಗಿರುವ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪೂಜ್ಯ ತಂದೆಯವರಾದ, ಶಹಾಜಿ ರಾಜೆ ಅವರು ಸುಮಾರು 400 ವರ್ಷಗಳ ಹಿಂದೆ ಪೀಠ ಸ್ಥಾಪಿಸಿದ ಇತಿಹಾಸದ ಕುರಿತು ಚರ್ಚಸಿದ್ದಾರೆ.
ಇದನ್ನೂ ಓದಿ: ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ, ನಿರ್ಭೀತಿಯಿಂದ ಮತದಾನ ಮಾಡಿ: ಪ್ರತಾಪ್ ರೆಡ್ಡಿ
ಮಹತ್ತರವಾಗಿ ಹೇಗೆ ಬೆಳೆಯಬೇಕು
ಶ್ರೀ ಮಂಜುನಾಥಭಾರತಿ ಸ್ವಾಮೀಜಿ ಅವರು ಭಗವದ್ಗೀತೆಯನ್ನು 50ಕ್ಕೂ ಹೆಚ್ಚಿನ ರಾಗಗಳಲ್ಲಿ ಸಂಯೋಜನೆ ಮಾಡಿ ಸ್ವತಃ ತಾವೇ ಹಾಡಿರುವ ಶ್ರೀ ಗೀತಾಮೃತ ರಾಗಾವಲ್ಲಿ ಬಗ್ಗೆ ಪ್ರಧಾನಿ ಮೋದಿ ಕುತೂಹಲಭರಿತವಾಗಿ ವಿಚಾರಿಸಿದ್ದಾರೆ.
ಭಗವದ್ಗೀತೆಯ 18ನೇ ಅಧ್ಯಾಯದ 700 ಶ್ಲೋಕಗಳನ್ನು ಸಂಪೂರ್ಣವಾಗಿ ಹಾಡಿದ್ದೀರಾ ಎಂದು ಕೇಳಿ ಸಂತಸ ವ್ಯಕ್ತಪಡಿಸಿದ ಪ್ರಧಾನಿ ಭವಿಷ್ಯದ ಭವ್ಯ ಭಾರತದ ಹೇಗಿರಬೇಕು ಧಾರ್ಮಿಕವಾಗಿ, ಅಧ್ಯಾತ್ಮಿಕವಾಗಿ, ಇಡೀ ಜಗತ್ತಿಗೆ ಶಾಂತಿಯ ಸಂಕೇತವಾಗಿ ಜಾಗತಿಕ ಮಟ್ಟದಲ್ಲಿ ಇನ್ನೂ ಮಹತ್ತರವಾಗಿ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ವಿದ್ಯಮಾನ ಕುರಿತು ಚರ್ಚೆ
ಪ್ರಸಕ್ತ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಕೇಳಿ ತಿಳಿದುಕೊಂಡು ತಮಂಥ ಸಾಧು-ಸಂತರು ನನ್ನ ದೇಶದಲ್ಲಿರುವವರೆಗೆ ಭವ್ಯ ಭಾರತದ ಬೆಳವಣಿಗೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ತಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ಸ್ವಾಮೀಜಿಗೆ ನಮಸ್ಕರಿಸಿ ಪ್ರಧಾನಿ ನರೇಂದ್ರ ಮೋದಿ ಆಶೀರ್ವಾದ ಪಡೆದಿದ್ದಾರೆ.