ಹೊನ್ನಾಳಿ: ನ್ಯಾಮತಿ ತಾಲೂಕಿನ ಸುರಹೊನ್ನೆ, ಕುದುರೆಕೊಂಡ, ಗೋವಿನಕೋವಿ ಮತ್ತಿತರ ಗ್ರಾಮಗಳಲ್ಲಿ ಶನಿವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಅನೇಕ ಮನೆ, ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಸುರಹೊನ್ನೆಯ 16 ನರ್ಸರಿಗಳು ಬಿರುಗಾಳಿ ಹೊಡೆತಕ್ಕೆ ನೆಲ ಕಚ್ಚಿವೆ. ತಾಲೂಕಿನ ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ಮನೆಗಳ ಹೆಂಚುಗಳು ಬಿದ್ದಿವೆ. 10ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿವೆ.
ಒಂದು ಮನೆಯ ಹೆಂಚುಗಳು ಪೂರ್ಣ ಬಿದ್ದಿವೆ. 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಭಾನುವಾರ ರಜೆ ಇದ್ದುದರಿಂದ ಅಧಿಕಾರಿಗಳು ನಷ್ಟದ ಅಂದಾಜು ಮಾಡಿಲ್ಲ.
ರೈತನ ತಲೆಗೆ ಪೆಟ್ಟು: ಸುರಹೊನ್ನೆಯ ನರಸಪ್ಪ ಎಂಬುವವರ ಮನೆಯ ತಗಡುಗಳು ಹಾರಿವೆ. ಕೆಲ ತಗಡು ಬಿದ್ದ ಪರಿಣಾಮ ನರಸಪ್ಪ ಎಂಬುವರ ತಲೆಗೆ ಪೆಟ್ಟಾಗಿದೆ. ವಿಷಯ ತಿಳಿದ ಕೂಡಲೇ ಕಂದಾಯ ಇಲಾಖೆ ನೌಕರರು ಆಸ್ಪತ್ರೆಗೆ ಸೇರಿಸಿದ್ದಾರೆ.
ಸ್ಥಳಕ್ಕೆ ಶಾಸಕರ ಭೇಟಿ: ವಿಷಯ ತಿಳಿದ ಕೂಡಲೇ ಶಾಸಕ ಎಂ.ಪಿ.ರೇಣುಕಾಚಾರ್ಯ ಸುರಹೊನ್ನೆ, ಕುದುರೆಕೊಂಡ ಮತ್ತಿತರ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಬೆಸ್ಕಾಂ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ತಹಸೀಲ್ದಾರ್ಗೆ ಕರೆ ಮಾಡಿ ನಷ್ಟದ ವರದಿ ನೀಡುವಂತೆ ಸೂಚಿಸಿದ್ದಾರೆ.
ಈ ವೇಳೆ ತಾಪಂ ಸದಸ್ಯರಾದ ಎಸ್.ಪಿ.ರವಿಕುಮಾರ್, ಸಿದ್ದಲಿಂಗಪ್ಪ, ಗ್ರಾಪಂ ಉಪಾಧ್ಯಕ್ಷ ಸದಾಶಿವ, ಎಪಿಎಂಸಿ ನಿರ್ದೇಶಕ ಕುಮಾರ್, ತಹಸೀಲ್ದಾರ್ ತನುಜಾ, ಉಪ ತಹಸೀಲ್ದಾರ್ ನಾಗರಾಜ್, ಗ್ರಾಮ ಲೆಕ್ಕಿಗ ಗಣೇಶ್ ಇದ್ದರು.