ನ್ಯೂಯಾರ್ಕ್: ನಾವು ವಿಶ್ವ ಕನ್ನಡಿಗರು (ನಾವಿಕ) ಸಂಸ್ಥೆ ಪ್ರತಿ ಶನಿವಾರ ಹಮ್ಮಿಕೊಳ್ಳುತ್ತಿರುವ ಕರೊನಾ ಕಷ್ಟಕಾಲದಲ್ಲಿ ಮುದಕೊಡುವ ಮಾತುಗಳು ಎಂಬ ಕಾರ್ಯಕ್ರಮದ 9ನೇ ಸಂಚಿಕೆ ನಡೆಯಿತು.
ಈ ಸಂದರ್ಭದಲ್ಲಿ ನಾವಿಕ ಅಧ್ಯಕ್ಷ ವಲ್ಲೀಶ ಶಾಸ್ತ್ರಿ ಮಾತನಾಡಿ ಇಲ್ಲಿಯವರೆಗೆ ಸಂಗ್ರಹಿಸಿರುವ 10 ಲಕ್ಷ ರೂ.ಗಳನ್ನು ಕರ್ನಾಟಕ ಮುಖ್ಯಮಂತ್ರಿಗಳ ಕರೊನಾ ಪರಿಹಾರ ನಿಧಿಗೆ ಸಮರ್ಪಿಸುವುದಾಗಿ ಘೋಷಿಸಿದರು. ಹಾಗೆಯೇ ನಾವಿಕ ಸಂಸ್ಥೆಯಿಂದ ಅಮೆರಿಕದಲ್ಲಿರುವ ಕರೊನಾ ಪೀಡಿತರಿಗೆ ಸಹಾಯ ಮಾಡುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಅಮೆರಿಕದಲ್ಲಿರುವ ವೈದ್ಯರ ಸೇವೆಯನ್ನು ಶ್ಲಾಘಿಸಿದರು.
ಇದನ್ನೂ ಓದಿ: ಟಿವಿ, ರೇಡಿಯೋದಲ್ಲಿ ಶಿಕ್ಷಣ ನೀಡಲು ಅನುಮತಿ ನೀಡಿ; ಮಹಾರಾಷ್ಟ್ರ ಶಿಕ್ಷಣ ಸಚಿವೆ
ಈ ಕರೊನಾ ತಕ್ಷಣದಲ್ಲಿ ಹೋಗುವುದಿಲ್ಲ ಮತ್ತು ನಾವು ಇದನ್ನು ದೀರ್ಘಕಾಲ ಎದುರಿಸಬೇಕಾಗಿರುವ ಅವಶ್ಯಕತೆಯನ್ನು ಒತ್ತಿ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ. ಟಿ ರವಿ ಮಾತನಾಡಿ, ಕರ್ನಾಟಕ ಜನತೆ ಮತ್ತು ಅನಿವಾಸಿ ಭಾರತೀಯರದು ಕರುಳು ಬಳ್ಳಿಯ ರಕ್ತ ಸಂಬಂಧ, ಹರಿಯಲಾರದ ನಂಟು. ಅಮೆರಿಕದವರು ಕರೊನಾದಿಂದ ತತ್ತರಿಸಿ ಹೋಗಿದ್ದರೂ ಸಹಿತ ನಾವಿಕ ಸಂಸ್ಥೆಯವರು 10 ಲಕ್ಷ ರೂ.ಗಳನ್ನು ಸಂಗ್ರಹಿಸಿ ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಟ್ಟಿರುವುದನ್ನು ಮುಕ್ತಕಂಠದಿಂದ ಹೊಗಳಿದರು.
ಖ್ಯಾತ ನಟ, ನಿರ್ದೇಶಕ, ಮಾತಿನ ಮಾಂತ್ರಿಕ ರಮೇಶ್ ಅರವಿಂದ್ “ಹೊಸ ಸಮಯ ಮತ್ತು ಹೊಸ ಆಲೋಚನೆ” (New Time and New Thinking ) ಎಂಬ ವಿಷಯದ ಬಗ್ಗೆ ಮಾತನಾಡಿ ನಾವು ಕಷ್ಟಕಾಲದಲ್ಲಿ ಹೇಗೆ ಪಾಸಿಟಿವ್ ಆಗಿ ಇರಬೇಕು ಎಂದು ಹೇಳಿದರು.
ಖ್ಯಾತ ಗಾಯಕರಾದ ಅರ್ಚನಾ ಉಡುಪ ಮತ್ತು ಚಿನ್ಮಯ್ ಅತ್ರೆಯಾಸ್ ಅಂತರ್ಜಾಲದ ಮೂಲಕ ನಡೆಸಿಕೊಟ್ಟ ಸಂಗೀತ ಸಂಜೆ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿತು. ಶ್ರೀನಾಥ್ ವಸಿಷ್ಠ ನಿರೂಪಿಸಿದರು.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಕುರ್ಚಿಗೆ ಕರ್ನಾಟಕ ಬರೆಯಲಿದೆಯೇ ಇತಿಹಾಸ?