ಧಾರವಾಡ: ತಿರುಪತಿ ತಿಮ್ಮಪ್ಪನ ಆಸ್ತಿ ಮಾರಾಟ ಮಾಡಿ ಸರ್ಕಾರಕ್ಕೆ ಹಣ ಜಮಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದೇ ರೀತಿ ಮುಂದುವರಿದರೆ ಮುಖ್ಯಮಂತ್ರಿ ಜಗನ್ಗೂ ತಂದೆಯಂತೆ ತಿರುಪತಿ ತಿಮ್ಮಪ್ಪನ ಶಾಪ ತಟ್ಟಲಿದೆ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಪತಿ ಕೇವಲ ಆಂಧ್ರಪ್ರದೇಶದ ದೇಗುಲವಲ್ಲ. ಅದು ಇಡೀ ಜಗತ್ತಿನ ದೇವಸ್ಥಾನ. ದೇವಸ್ಥಾನಕ್ಕೆ ಬಂದ ಹಣವನ್ನು ಅದೇ ದೇವಸ್ಥಾನದ ಉದ್ಧಾರಕ್ಕೆ ಬಳಸಬೇಕು. ಯಾರೂ ಸ್ವಾರ್ಥಕ್ಕೋಸ್ಕರ ಬಳಸಬಾರದು. ಜಾತ್ಯತೀತ ಎನ್ನುವ ಇವರು ಕೇವಲ ಹಿಂದು ದೇವಸ್ಥಾನಗಳ ಮೇಲೆ ಆಘಾತವನ್ನುಂಟು ಮಾಡುತ್ತಿದ್ದಾರೆ. ಮದರಸಾ, ಚರ್ಚ್, ವಕ್ಪ್ ಬೋರ್ಡ್ಗಳ ಆಸ್ತಿ ಸಾಕಷ್ಟಿದೆ. ಆ ಬಗ್ಗೆ ಮಾತನಾಡದ ಸರ್ಕಾರ ಕೇವಲ ಹಿಂದು ದೇವಸ್ಥಾನಗಳ ಮೇಲಷ್ಟೇ ಕಣ್ಣು ಹಾಕುತ್ತಿದೆ. ಜಗನ್ ತಂದೆ ಈ ರೀತಿ ಮಾಡಿ ತಿರುಪತಿ ತಿಮ್ಮಪ್ಪನ ಶಾಪದಿಂದ ಸತ್ತು ಹೋದರು. ಜಗನ್ ಅದೇ ಹಾದಿ ಮುಂದುವರಿಸಿದರೆ ಅವರಿಗೂ ಶಾಪ ತಟ್ಟಲಿದೆ. ತಿರುಪತಿ ದೇವಸ್ಥಾನದ ಸ್ಥಿರಾಸ್ತಿ ಮಾರಾಟ ಮಾಡಬಾರದು ಎಂದು ಜಿಲ್ಲಾಡಳಿತದ ಮೂಲಕ ಆಂಧ್ರಪ್ರದೇಶ ರಾಜ್ಯಪಾಲರಿಗೆ ಮನವಿ ರವಾನಿಸಿದ್ದೇವೆ ಎಂದರು.