ಬಾಗಲಕೋಟೆ: ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಅದೇ ಸಮುದಾಯದವರಾದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಇಂದು ನೇರ ಸವಾಲ್ ಹಾಕಿದ್ದಾರೆ.
ಬಾಗಲಕೋಟೆ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರಾಣಿ, ‘‘ನನ್ನ ಮೇಲೆ ಸಾಕಷ್ಟು ಆರೋಪ ಮಾಡಿದ್ದಾರೆ. ಮಾಡಿರುವ ಆರೋಪ ಸಾಬೀತು ಮಾಡಿದ್ರೆ ಇವತ್ತೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವೆ. ಸಾಬೀತು ಮಾಡದೇ ಇದ್ರೆ ನೀವು ಸನ್ಯಾಸತ್ವ ತೊರೆದು ರಾಜಕೀಯಕ್ಕೆ ಬನ್ನಿ’’ ಎಂದು ಸವಾಲು ಹಾಕಿದರು.
ನಿನ್ನೆ ಸಂದರ್ಶನದಲ್ಲಿ ಪಂಚಮಸಾಲಿ 2ಎ ಮೀಸಲಾತಿ ಘೋಷಣೆ ಆಗದೇ ಇರಲು ಬಾಗಲಕೋಟೆ ಜಿಲ್ಲೆಯ ನಮ್ಮ ಸಮಾಜದ ಸಚಿವರು ಕಾರಣ ಎಂದು ಸ್ವಾಮೀಜಿ ಆರೋಪಿಸಿದ್ದಕ್ಕೆ ಸಚಿವ ನಿರಾಣಿ ಗರಂ ಆಗಿದ್ದಾರೆ. ‘‘ಸ್ವಾಮೀಜಿಗಳ ಬಗ್ಗೆ ಗೌರವ ಇದೆ. ನನ್ನ ಬಗ್ಗೆ ಎಷ್ಟೇ ಮಾತಾಡಿದರೂ ನನಗೆ ಅಸಮಾಧಾನ ಇಲ್ಲ. ಅವರು ಎಲ್ಲಿಯೇ ಭೇಟಿಯಾದರೂ ಅವರ ಕಾಲಿಗೆ ನಮಸ್ಕಾರ ಮಾಡ್ತೇನೆ’’ ಎಂದು ನಿರಾಣಿ ಹೇಳಿದರು.
‘‘ನಾನು ಪಂಚಮಸಾಲಿ ಮೀಸಲಾತಿ ಕೊಡಲು ಅಡ್ಡಿ ಮಾಡಿದೆ ಅಂತ ಸ್ವಾಮೀಜಿ ಹೇಳಿದ್ದಾರೆ. ಅದಕ್ಕೆ ಸಾಕ್ಷಿ ಕೊಟ್ಟರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವೆ. ಇಲ್ಲವಾದರೆ ನೀವು ಸನ್ಯಾಸತ್ವ ಬಿಟ್ಟು ರಾಜಕೀಯಕ್ಕೆ ಬನ್ನಿ’’ ಎಂದು ಸವಾಲೆಸೆದರು.