ಮುಂಡರಗಿ: ಕೃಷಿ ಕಾಯಕ ಮಾಡುವವರ ತನು, ಮನ, ಭಾವ ಶುದ್ಧವಾಗಿರುತ್ತವೆ. ಸತ್ಯಶುದ್ಧ ಕಾಯಕದಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ಮನುಷ್ಯ ಮಾನವೀಯ ಮೌಲ್ಯ, ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ತಾಲೂಕಿನ ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯಮಠದ 284ನೇ ಜಾತ್ರಾ ಮಹೋತ್ಸವದ ನಿಮಿತ್ತ ಶನಿವಾರ ಏರ್ಪಡಿಸಿದ್ದ ಮಹಾರಥೋತ್ಸವಕ್ಕೆ ಚಾಲನೆ ನೀಡಿ, ನಂತರ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಲಿಂ.ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಸ್ವತಃ ತಾವೇ ಕೃಷಿಯಲ್ಲಿ ತೋಡಗಿ ಈ ಭಾಗದಲ್ಲಿ ಕೃಷಿ, ತೋಟಗಾರಿಕೆಗೆ ಆದ್ಯತೆ ನೀಡುವುದರ ಮೂಲಕ ಅನೇಕರನ್ನು ಕೃಷಿಯಲ್ಲಿ ತೊಡಗುವಂತೆ ಪ್ರೋತ್ಸಾಹಿಸಿದರು ಎಂದರು. ಹೈದರಾಬಾದ್ನ ಸಿಂಹಾಸನರೂಢ ಸ್ವಾಮೀಜಿ ಮಾತನಾಡಿ, ರಥೋತ್ಸವ ನಮ್ಮೆಲ್ಲರನ್ನೂ ಒಗ್ಗಟ್ಟಾಗಿಸುವ ಕಾರ್ಯ ಮಾಡುತ್ತದೆ. ನಮ್ಮ ಮನಸ್ಸು ಶುದ್ಧವಾಗಬೇಕೆಂದರೆ ಇಂತಹ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಶರಣರ, ಗುರುಗಳ ಹಿತಚಿಂತನ ಮಾತುಗಳನ್ನು ಆಲಿಸಬೇಕು ಎಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಪ್ರತಿಯೊಬ್ಬರೂ ಉತ್ತಮ ದಾರಿಯಲ್ಲಿ ಸಾಗಲು ಜಾತ್ರಾ ಮಹೋತ್ಸವಗಳು ಪ್ರೇರಣೆಯಾಗಿವೆ. ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪುನೀತರಾಗಬೇಕು. ಲಿಂ.ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಈ ಭಾಗದಲ್ಲಿ ನೀರಾವರಿ ಆಗಬೇಕು ಎಂಬ ಮಹದಾಸೆ ಹೊಂದಿದ್ದರು. ಶ್ರೀಗಳ ಆಸೆ ಈಡೇರಿಸಲು ಯತ್ನಿಸಲಾಗುವುದು ಎಂದರು. ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿದರು. ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ, ಬಸವಂತಪ್ಪ ಪಟ್ಟಣಶೆಟ್ಟರ, ಶಂಕರಗೌಡ ಜಾಯನಗೌಡರ, ಜಾತ್ರಾ ಸಮಿತಿ ಅಧ್ಯಕ್ಷ ಬಸವರಾಜ ಹಮ್ಮಿಗಿ, ಉಪಾಧ್ಯಕ್ಷ ಭೀಮಪ್ಪ ಗದಗಿನ, ಅಶೋಕ ಮಾನೆ, ಮಲ್ಲಣ್ಣ ರೇವಡಿ ಇದ್ದರು.