ಮಂಗಳೂರು: ‘ನಾನು ಸ್ವಾಮಿ ವಿವೇಕಾನಂದರ ತತ್ವ ಸಿದ್ಧಾಂತಗಳಿಂದ ಪ್ರಭಾವಿತನಾದವನು. ರಾಮಕೃಷ್ಣ ಪರಮಹಂಸರ ಸರ್ವರು ಸಮಾನರು ಎಂಬ ದಿಸೆಯಲ್ಲಿ ಕರ್ತವ್ಯ ನಿರ್ವಹಿಸುವುದು ನನ್ನ ಧರ್ಮ’ ಎಂದು ಒಳಮೊಗ್ರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ಹೇಳಿದ್ದಾರೆ.
ಅವರು ಶನಿವಾರ ಉಳ್ಳಾಲ ತಾಲೂಕಿನ ಮುಡಿಪುನಲ್ಲಿರುವ ನವಚೇತನ ಜೀವನ ಶಿಕ್ಷಣ ಕೇಂದ್ರದಲ್ಲಿ ಜನ ಶಿಕ್ಷಣ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಮಾನವ ಗ್ರಂಥಾಲಯ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಬದುಕು ವೃತ್ತಾಂತವನ್ನು ತೆರೆದಿಟ್ಟರು.
ಜನರಿಗೆ ಸೇವೆ ನೀಡುವ ಸಲುವಾಗಿಯೇ ನಾನು ಸರ್ಕಾರಿ ಉದ್ಯೋಗಕ್ಕೆ ಸೇರಿದ್ದೇನೆ. ಭ್ರಷ್ಟಾಚಾರ ರಹಿತವಾಗಿ ಸೇವೆ ನೀಡುವ ಸಂಕಲ್ಪವನ್ನು ಇಲಾಖೆಗೆ ಸೇರುವ ಮೊದಲೇ ಕೈಗೊಂಡಿದ್ದೇನೆ. 9 ವರ್ಷಗಳ ನನ್ನ ಸರ್ಕಾರಿ ಸೇವೆಯಲ್ಲಿ ಯಾರಿಂದಲೂ ಲಂಚ ಪಡೆದಿಲ್ಲ, ಉಡುಗೊರೆಗಳನ್ನು ಸ್ವೀಕರಿಸಿಲ್ಲ. ಕೆಲವು ಸಂದರ್ಭಗಳಲ್ಲಿ ಚಹಾ ಕುಡಿದಿರಬಹುದು ಎಂದು ಅವರು ತಮ್ಮ ಮನದ ಮಾತು ಮುಚ್ಚಿಟ್ಟರು.
ಹೋದ ಕಡೆಗಳಲ್ಲಿ ಕಾನೂನಿನ ಅಡಿಯಲ್ಲಿಯೇ ಕೆಲಸ ಮಾಡಿದ್ದೇನೆ. ಗ್ರಾಮ ಪಂಚಾಯಿತಿಗಳ ಆಡಳಿತ ಮಂಡಳಿಗಳು, ಸಿಬ್ಬಂದಿ ಮತ್ತು ಜನತೆ ಸಹಕಾರ ಕೊಟ್ಟಿದ್ದಾರೆ. ಅದು ನನ್ನ ಸೇವಾ ಬದ್ಧತೆಯನ್ನು ಇಮ್ಮಡಿಗೊಳಿಸಿದೆ. ಉದ್ಯೋಗದಲ್ಲಿ ಮೇಲು- ಕೀಳು ಎಂಬುದಿಲ್ಲ. ಹೇಗೆ ಸೇವೆ ಕೊಡುತ್ತೇವೆ ಎಂಬುದು ಮುಖ್ಯ ಎಂದು ಅವರು ಹೇಳಿದರು.
ಜನಜೀವನ ಬಾಳೆಪುಣಿಯ ಅಧ್ಯಕ್ಷ ರಮೇಶ ಶೇಣವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿಗಳಾದ ಇಬ್ರಾಹಿಂ ನಡುಪಪದವು, ರಾಧಾಕೃಷ್ಣ ರೈ ಉಮಿಯ, ರಂಗಕರ್ಮಿ ಶಿವಪ್ರಸಾದ್ ಆಳ್ವ, ಕ್ರೀಡಾ ಸಂಘಟಕ ಹೈದರ್ ಕೈರಂಗಳ, ಪಿಡಿಒ ಚಂದ್ರಶೇಖರ ಪಾತೂರು, ಸಾಹಿತಿ ಚಂದ್ರಹಾಸ ಕಣಂತೂರು, ಬಾಳೆಪುಣಿ ಗ್ರಾ.ಪಂ ಕಾರ್ಯದರ್ಶಿ ಆಯಿಷಾ ಭಾನು, ಸೆಲ್ಕೋ ಮಂಗಳೂರು ತಾಲೂಕು ವ್ಯವಸ್ಥಾಪಕ ರವೀನಾ ಕುಲಾಲ್, ಸಮಾಜ ಸೇವಕ ಇಸ್ಮಾಯಿಲ್ ಕಣಂತೂರು ಮೊದಲಾದವರು ಉಪಸ್ಥಿತರಿದ್ದರು.
ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಸ್ವಾಗತಿಸಿದರು. ಮಾಜಿ ಒಂಬುಡ್ಸ್ಮನ್, ದ.ಕ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಸಮನ್ವಯಕಾರರಾಗಿದ್ದರು.