ಮುಧೋಳ: ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಲೂಕಿನಲ್ಲಿ ಅಂದಾಜು 141 ಮನೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, 400ಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿವೆ.
ಮುಧೋಳದ ಗೌಳಿ ಗಲ್ಲಿಯ ಹಲವಾರು ಮನೆಗಳು ಹಾಗೂ ಹಲವಾರು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ.
ಮಿರ್ಜಿ, ಢವಳೇಶ್ವರ, ಚನ್ನಾಳ, ಜಾಲಿಬೇರ, ಮುಧೋಳ, ಸಿದ್ಧೇಶ್ವರ, ಜೀರಗಾಳ, ಕೆ.ಡಿ. ಜಂಬಗಿ, ಕಸಬಾಜಂಬಗಿ, ಇಂಗಳಗಿ, ಆಲಗುಂಡಿ ಬ್ಯಾರೇಜ್ಗಳ ಮೇಲೆ ನೀರು ಹರಿಯುತ್ತಿದೆ. ಮಾಚಕನೂರ ಹೊಳೆಬಸವೇಶ್ವರ ದೇವಾಲಯ ಸಂಪೂರ್ಣವಾಗಿ ನೀರಲ್ಲಿ ನಿಂತಿದ್ದು ಜನರು ದೂರದಿಂದಲೇ ದರ್ಶನ ಮಾಡುತ್ತಿದ್ದಾರೆ. ಬ್ಯಾರೇಜ್ಗಳ ಮೇಲೆ ಪ್ರಯಾಣಿಸುವ ಜನರಿಗೆ ತೊಂದರೆಯಾಗಿದೆ.
ಮುಧೋಳ ತಾಲೂಕಿನ ಉತ್ತೂರ ಬಳಿ ಭಾರಿ ಗಾತ್ರದಲ್ಲಿ ತಗ್ಗು ನಿರ್ಮಾಣವಾಗಿ ವಾಹನಗಳಿಗೆ ತೀವ್ರ ತೊಂದರೆಯಾಗಿದ್ದರೂ ಯಾವೊಬ್ಬ ಅಧಿಕಾರಿಯೂ ಈ ಕಡೆಗೆ ಗಮನ ಹರಿಸುತ್ತಿಲ್ಲ.
ಕೃಷಿ ಇಲಾಖೆ ಸಿಬ್ಬಂದಿ ಬೆಳೆ ಹಾನಿ ಸಮೀಕ್ಷೆ ಮಾಡುತ್ತಿದ್ದಾರೆ. ಸದ್ಯದ ಪ್ರಾಥಮಿಕ ಮಾಹಿತಿ ಪ್ರಕಾರ ಅಂದಾಜು 2632 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಸಂಪೂರ್ಣ ಮಾಹಿತಿ ಪಡೆದು ಸೂಕ್ತ ಪರಿಹಾರಕ್ಕೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು.
– ಬಿ.ವಿ. ದಾಸರ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಮುಧೋಳ