ಮುದ್ದೇಬಿಹಾಳ: ಪ್ರಧಾನಿ ನರೇಂದ್ರ ಮೋದಿಯವರ ಇಚ್ಛಾಶಕ್ತಿ ಲವಾಗಿ 34 ವರ್ಷಗಳ ನಂತರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.
ಪಟ್ಟಣದ ಎಂಜಿವಿಸಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020 ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣದಿಂದ ದೇಶದ ಭವಿಷ್ಯ ನಿರ್ಮಾಣ ಮಾಡುವ ಕೆಲಸ ಆಗಬೇಕು. ಆದರೆ, ಸ್ವಾತಂತ್ರೃ ನಂತರ ಬಂದ ಪ್ರಧಾನಿಗಳು ಈ ಕೆಲಸ ಮಾಡಲಿಲ್ಲ. ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಬರಬೇಕು ಎಂದರೂ ನಮಗೆ ಸಿಗಲಿಲ್ಲ. ಭಾರತ ಮೂಢನಂಬಿಕೆಗಳನ್ನು ಬಿತ್ತುವ ರಾಷ್ಟ್ರ ಎಂದು ಹಿಂದಿನ ಪ್ರಧಾನಿಯೊಬ್ಬರು ಪ್ರಚಾರ ಮಾಡಿಕೊಂಡು ತಿರುಗಾಡುವ ಕೆಲಸ ಮಾಡಿದ್ದರು ಎಂದು ಹೇಳಿದರು.
ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಅಂಗನವಾಡಿಯಲ್ಲಿರುವ ಶಿಕ್ಷಕರಿಗೆ ಶಿಕ್ಷಕ ತರಬೇತಿ ನೀಡಲು ಪ್ರಸ್ತಾಪಿಸಲಾಗಿದೆ. ಪಿಯುಸಿ ಕಲಿತವರಿಗೆ ಆರು ತಿಂಗಳು, ಎಸ್ಎಸ್ಎಲ್ಸಿ ಆದವರಿಗೆ ವರ್ಷ ಕಾಲ ತರಬೇತಿ ನೀಡಲಾಗುತ್ತದೆ. ಪೂರ್ವ ಪ್ರಾಥಮಿಕ ಹಂತ ರಾಷ್ಟ್ರದ ಶಿಕ್ಷಣ ವ್ಯವಸ್ಥೆಯ ಬುನಾದಿಯನ್ನು ಭದ್ರಗೊಳಿಸಲಿದೆ. ಸರ್ಕಾರಿ ವ್ಯವಸ್ಥೆಯಲ್ಲೂ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ಪ್ರಸ್ತಾಪಿಸಲಾಗಿದೆ. ಐದನೇ ತರಗತಿವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಆಗಬೇಕು. ಆಗ ಮಗುವಿನ ಕಲಿಕೆ ಸ್ಪಷ್ಟವಾಗಿರುತ್ತದೆ ಎಂದರು.
ಶಿಕ್ಷಕ ಸಂಘದ ಪ್ರತಿನಿಧಿ ಸಿದ್ದು ಹಂಚಿನಾಳ ಮಾತನಾಡಿದರು. ಕಾಲೇಜಿನ ಕಾರ್ಯಾಧ್ಯಕ್ಷ ಅಶೋಕ ತಡಸದ, ಬಿಇಒ ವೀರೇಶ ಜೇವರಗಿ, ಶಿಕ್ಷಕ ಸಂಘದ ಪ್ರಮುಖರಾದ ರವೀಂದ್ರ ತುಂಗಳ, ಶಿವಾನಂದ ಗುಡ್ಡೋಡಗಿ, ಪ್ರಾಚಾರ್ಯ ಎ.ಬಿ. ಕುಲಕರ್ಣಿ, ಎಸ್.ಎನ್. ಪೊಲೇಶಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ. ಚಲವಾದಿ, ಪ್ರಭಾರಿ ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಲ್. ಕರಡ್ಡಿ, ಬಿಆರ್ಸಿ ಯು.ಬಿ.ಧರಿಕಾರ, ಟಿ.ಡಿ. ಲಮಾಣಿ, ಬಿ.ಎಸ್.ಪಾಟೀಲ, ಎಸ್.ಆರ್.ನಾಯಕ ಮತ್ತಿತರರು ಇದ್ದರು.
ಭಾಷೆಯನ್ನು ಕಲಿಕೆಯ ಸಾಧನವಾಗಿ ನೋಡಬೇಕು. ವಿದೇಶಿ ಭಾಷೆಯನ್ನು ಕಲಿಸಲು ಅವಕಾಶ ಮಾಡಿಕೊಡಬೇಕು. ಜಾಗತಿಕ ಸ್ಪರ್ಧೆಗೆ ಭಾರತದ ಮಕ್ಕಳು ಸಿದ್ಧರಾಗಬೇಕು. ಭಾಷೆಯಿಂದ ಒಬ್ಬರನ್ನೊಬ್ಬರನ್ನು ಪ್ರೀತಿಸುವ ಕಾರ್ಯ ಆಗಬೇಕು.
ಅರುಣ ಶಹಾಪುರ, ವಿಧಾನ ಪರಿಷತ್ ಸದಸ್ಯ