ಮುದ್ದೇಬಿಹಾಳ: ಸರ್ಕಾರ ಹಲವು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಆಧಾರ್ ಕಾರ್ಡ್ ಮಾಡಿದ್ದರೂ ಅಗತ್ಯ ಎಂಬ ಕಾರಣಕ್ಕಾಗಿ ಹಲವು ದೋಷಗಳನ್ನು ಹೊಂದಿರುವ ಕಾರ್ಡ್ನ ತಿದ್ದುಪಡಿ ಸಲುವಾಗಿ ಜನರ ಪರದಾಟ ನಿಂತಿಲ್ಲ.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ನಿತ್ಯವೂ ಬೆಳಗ್ಗೆಯೇ ಜನರು ಗುಂಪಾಗಿ ಆಧಾರ್ ಕಾರ್ಡ್ ಸಂಬಂಧ ವಿವಿಧ ಕೆಲಸಗಳಿಗಾಗಿ ಬರುತ್ತಿದ್ದಾರೆ. ಕೋವಿಡ್-19 ಹಿನ್ನೆಲೆ ನೋಂದಣಿ, ತಿದ್ದುಪಡಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಇದೀಗ ಲಾಕ್ಡೌನ್ ಸಡಿಲಿಕೆ ಬಳಿಕ ಆಧಾರ್ ಕಾರ್ಡ್ನ ನೋಂದಣಿ, ತಿದ್ದುಪಡಿ ಕಾರ್ಯವನ್ನು ಮತ್ತೆ ಆರಂಭಿಸಲಾಗಿದೆ.
ತಹಸೀಲ್ದಾರ್ ಕಚೇರಿ ಎದುರಿಗೆ ತಾಲೂಕಿನ ಕುಂಚಗನೂರ, ಚವನಬಾವಿ ಸೇರಿ ನಗರದ ನಿವಾಸಿಗಳು ಬೆಳಗ್ಗೆ 5 ಗಂಟೆಗೂ ಮುಂಚೆ ಬಂದು ಕಚೇರಿ ಎದುರಿಗೆ ಕಾಯುತ್ತಿರುವ ದೃಶ್ಯ ಕಂಡು ಬಂದಿದೆ.
ಪರಸ್ಪರ ಅಂತರವನ್ನು ಮರೆತು ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಕಾರ್ಯ ಮಾಡುವುದರಿಂದ ಎಲ್ಲಿಂದಲೋ ಬಂದವರಲ್ಲಿ ಸೋಂಕು ಇರುವುದನ್ನು ತಳ್ಳಿ ಹಾಕಲಾಗದು. ಇಡೀ ಸಮುದಾಯಕ್ಕೆ ಕರೊನಾ ಹಬ್ಬುವ ಆತಂಕವಿದ್ದು, ಈ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಕರೊನಾ ತಡೆಗೆ ಹಲವು ಮಾರ್ಗದರ್ಶಿ ಸೂಚನೆಗಳನ್ನು ತಾಲೂಕಾಡಳಿತ ನೀಡಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿವೆ.
ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಬರುವವರಿಗೆ ಮುಂಚಿತವಾಗಿ ಟೋಕನ್ ಕೊಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು. ನಿತ್ಯ 30 ಜನಕ್ಕೆ ಟೋಕನ್ ನೀಡಲಾಗುತ್ತದೆ. ಪರಸ್ಪರ ಅಂತರ ಪಾಲನೆ ಮಾಡುವುದು, ಮಾಸ್ಕ್ ಧರಿಸಿಕೊಂಡು ಬರುವುದನ್ನು ಕಡ್ಡಾಯಗೊಳಿಸಲಾಗಿದೆ. ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ನಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ನೋಂದಣಿ ಕಾರ್ಯ ನಡೆಸುವಂತೆ ಸೂಚಿಸಲಾಗುತ್ತದೆ.
ಜಿ.ಎಸ್. ಮಳಗಿ, ತಹಸೀಲ್ದಾರ್, ಮುದ್ದೇಬಿಹಾಳ
ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ವೇಳೆ ಆಗುತ್ತಿರುವ ಗದ್ದಲ ನೋಡಿದರೆ ಕರೊನಾ ಭಯ ಇವರಿಗಿಲ್ಲವೇ ಎಂಬ ಆತಂಕ ಕಾಡುತ್ತದೆ. ಮನೆಯಿಂದ ಹೊರಗೆ ಬರಬೇಡಿ ಎಂದು ಹೇಳುತ್ತಿದ್ದ ಸರ್ಕಾರ ಇಂದು ಪರಸ್ಪರ ಅಂತರ ಮರೆತು ಗುಂಪುಗೂಡುವುದಕ್ಕೆ ಆಸ್ಪದ ಕೊಡುತ್ತಿದೆ. ಪರಸ್ಪರ ಅಂತರ ಕಾಯ್ದುಕೊಂಡು ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಮಾಡುವುದಕ್ಕೆ ಸೂಚಿಸಬೇಕು.
ಅಸ್ಪಾಕ್ ನಾಡಗೌಡ, ಕಾರ್ಯಾಧ್ಯಕ್ಷ, ಕರವೇ ಸ್ವಾಭಿಮಾನಿ ಬಣ