ಮುದಗಲ್: ಆಯುಷ್ಮಾನ್ಭವ ಯೋಜನೆ ಬಡವರಿಗೆ ವರದಾನವಾಗಿದೆ ಎಂದು ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಂತಕುಮಾರ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಆಯುಷ್ಮಾನ್ಭವ ಆರೋಗ್ಯ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.
ಕೇಂದ್ರ ಸರ್ಕಾರ ಸೆಪ್ಟೆಂಬರ್ ಕೊನೆಯ ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ ಯೋಜನೆ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಲಿಕ್ಕಾಗಿ ಮೇಳವನ್ನು ಆಯೋಜಿಸಿದೆ. ಈ ಮೂಲಕ ಪ್ರತಿಯೊಬ್ಬ ರೋಗಿಗಳ ಹೇಲ್ತ್ ಡಿಜಿಟಲ್ ಖಾತೆ ತೆರೆಯಲಾಗುತ್ತದೆ. ಮತ್ತು ಅವರಿಗೆ 5 ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆ ನಿಡಲಾಗುತ್ತದೆ ಎಂದರು.
ಆರೋಗ್ಯ ಸಹಾಯಕ ಬಸವರಾಜ ಬುದ್ದಿನ್ನಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಯುಷ್ಮಾನ್ಭವ ಯೋಜನೆಯಡಿ ಟಿಬಿ, ಶಸ್ತ್ರ ಚಿಕಿತ್ಸೆ ಸೇರಿ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯಬೇಕು ಎಂದರು.
ರಾಯಚೂರು ನವೋದಯ ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ.ಮಲ್ಲೇಶಪ್ಪ , ಲಿಂಗಸುಗೂರು ಆರೊಗ್ಯ ಅಧಿಕಾರಿ ಪ್ರಾಣೇಶ ಮಾತನಾಡಿದರು. ಇದೆ ವೇಳೆ ಅಂಗಾಂಗ ದಾನ ಮತ್ತು ಸಾವಿನ ನಂತರವೂ ಮತ್ತೊಬ್ಬರ ಬದುಕಿಗೆ ಆಸರೆಯಾಗುವ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಡಾ.ವಿನೋದಕುಮಾರ, ನವೋದಯ ಮೆಡಿಕಲ್ ಕಾಲೇಜು ಪ್ರಾಧ್ಯಾಪಕರಾದ ಡಾ.ಅಭಿಲಾಷಾ, ಡಾ.ಶ್ರುತಿಶ್ರೀ, ಡಾ.ಸುನೀಲ್ಕುಮಾರ್, ಡಾ.ಅರುಣಕುಮಾರ, ಪುರಸಭೆ ಮುಖ್ಯಾಧಿಕಾರಿ ನಭಿಸಾಬ್ ಕಂದಗಲ್, ಮುಕ್ತುಮ ಸಾಬ್ ಇತರರಿದ್ದರು.