ಬೆಂಗಳೂರು: ಮುತ್ತಪ್ಪ ರೈ ಅವರ ಜೀವನವನ್ನಾಧರಿಸಿ ನಿರ್ಮಾಣವಾಗುತ್ತಿರುವ ರವಿ ಶ್ರೀವತ್ಸ ನಿರ್ದೇಶನದ ‘ಎಂಆರ್’ ಚಿತ್ರವನ್ನು ಕೈಬಿಡುವಂತೆ ರೈ ಅವರ ಆಪ್ತ ಮತ್ತು ನಿರ್ಮಾಪಕ ಪದ್ಮನಾಭ ಗೌಡ ಆಗ್ರಹಿಸಿದ್ದರು. ಇದೀಗ ರೈ ಮಕ್ಕಳ ಅನುಮತಿ ಇಲ್ಲದಿದ್ದರೆ ಈ ಚಿತ್ರ ಮಾಡುವಂತಿಲ್ಲ ಎಂದು ಮುತ್ತಪ್ಪ ರೈ ಅವರು ವಿಲ್ನಲ್ಲೇ ನಮೂದಿಸಿರುವ ವಿಷಯವೊಂದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಸಾಮಾನ್ಯ ಮನುಷ್ಯ ಎಷ್ಟು ಲಂಚ ಕೊಡಬೇಕು ಗೊತ್ತಾ? ಕಮಲ್ ಹಾಸನ್ ಹೇಳ್ತಾರೆ ಕೇಳಿ …
ಈ ಹಿಂದೆ ನಿರ್ಮಾಪಕ ಮತ್ತು ಮುತ್ತಪ್ಪ ರೈ ಅವರ ಆಪ್ತ ಪದ್ಮನಾಭ್ ಗೌಡ, ಕುಟುಂದವರ ಅನುಮತಿ ಇಲ್ಲದೆಯೇ ಚಿತ್ರ ಮಾಡುವಂತಿಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲ, ತಕ್ಷಣವೇ ಚಿತ್ರವನ್ನು ನಿಲ್ಲಿಸಬೇಕೆಂದು ನಿರ್ದೇಶಕ ರವಿ ಶ್ರೀವತ್ಸ ಮತ್ತು ನಿರ್ಮಾಪಕ ಶೋಭಾ ರಾಜಣ್ಣ ಅವರಿಗೆ ಸೂಚಿಸಿದ್ದರು.
ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ್ದ ರವಿ ಶ್ರೀವತ್ಸ, ‘ಚಿತ್ರ ನಿಲ್ಲಿಸುವ ಮಾತಿಲ್ಲ. ‘ಎಂಆರ್’ ಚಿತ್ರವನ್ನು ಖಂಡಿತಾ ನಿರ್ದೇಶನ ಮಾಡುತ್ತೇನೆ. ಒಂದೇ ವಿಷಯದ ಬಗ್ಗೆ ಎರಡು, ಮೂರು ಚಿತ್ರಗಳು ನಿರ್ಮಾಣವಾದ ಉದಾಹರಣೆಗಳು ಹಲವಿದೆ. ಅದೇ ರೀತಿಯಲ್ಲಿ ಮುತ್ತಪ್ಪ ರೈ ಕುರಿತು ಅವರೂ ಸಿನಿಮಾ ಮಾಡಲಿ, ನಾನೂ ಸಿನಿಮಾ ಮಾಡುತ್ತೇನೆ. ಇಲ್ಲಿ ಯಾರೂ, ಯಾರನ್ನೂ ತಡೆಯುವುದಕ್ಕೆ ಸಾಧ್ಯ ಇಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕಿದೆ. ಇಷ್ಟಕ್ಕೂ ನಾನೇನು ಮುತ್ತಪ್ಪ ರೈ ಅವರನ್ನು ಕೆಟ್ಟದಾಗಿ ತೋರಿಸುತ್ತಿಲ್ಲ. ನಡೆದಿರುವ ಸತ್ಯಗಳನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಹೇಳಿದ್ದರು ರವಿ ಶ್ರೀವತ್ಸ.
ಇದಕ್ಕೆ ಪ್ರತಿಯಾಗಿ ಪತ್ರಿಕಾಗೋಷ್ಠಿ ಆಯೋಜಿಸಿದ್ದ ಪದ್ಮನಾಭ ಗೌಡ, ಈ ವಿಷಯವನ್ನು ಲಘುವಾಗಿ ತೆಗೆದುಕೊಳ್ಳಬಾರದಾಗಿ ಚಿತ್ರತಂಡದವರಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ತಮಿಳಿಗೆ ಧ್ರುವ ಸರ್ಜಾ ಅಭಿನಯದ ಪೊಗರು
ಸಂದರ್ಭದಲ್ಲಿ ಮಾತನಾಡಿದ ರೈ ಅವರ ಪರ ಲಾಯರ್ ನಾರಾಯಣಸ್ವಾಮಿ, ‘ಬಹುಶಃ ರೈ ಅವರಿಗೆ ತಮ್ಮ ನಂತರ ಹೀಗೆಲ್ಲ ಆಗಬಹುದು ಎಂದು ಗೊತ್ತಿದ್ದಿರಬೇಕು. ಅದೇ ಕಾರಣಕ್ಕೆ ತಮ್ಮ ಮಕ್ಕಳಾದ ರಾಕಿ ರೈ ಮತ್ತು ರಿಕ್ಕಿ ರೈ ಅನುಮತಿ ಇಲ್ಲದೆ ಯಾರೂ ಸಹ ತಮ್ಮ ಕುರಿತು ಚಿತ್ರ ಮಾಡುವಂತಿಲ್ಲ ಎಂದು ವಿಲ್ನಲ್ಲೇ ಬರೆದಿದ್ದಾರೆ. ಹಾಗಾಗಿ, ಚಿತ್ರೀಕರಣ ಮುಂದುವರೆಸುವುದಕ್ಕೆ ಮೊದಲು ಮಕ್ಕಳ ಅನುಮತಿ ಪಡೆಯಿರಿ’ ಎಂದು ಹೇಳಿದರು.