ಮೈಸೂರು: ರಾಜಕೀಯದಲ್ಲಿ ಇರುವವರು ನಿವೃತ್ತಿಯೇ ಆಗುವುದಿಲ್ಲ ಎಂಬ ಟೀಕೆಯೂ ಇದೆ. ಇನ್ನೊಂದು ಕಡೆ ಕೆಲವರು ‘ಇದೇ ಕೊನೆಯ ಚುನಾವಣೆ, ಆಮೇಲೆ ನಿವೃತ್ತಿ’ ಎಂದು ಹೇಳಿ ಮತ್ತೆ ಮತ್ತೆ ಚುನಾವಣೆಗೆ ಸ್ಪರ್ಧಿಸುವುದು ಕೂಡ ನಡೆದಿದೆ. ಈ ಮಧ್ಯೆ ರಾಜ್ಯ ರಾಜ್ಯಕೀಯದಲ್ಲಿ ಇನ್ನೊಂದು ನಿವೃತ್ತಿಯ ಘೋಷಣೆಯಾಗಿದೆ.
ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಇದೀಗ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮಾತ್ರವಲ್ಲ, ಯಾವಾಗ ನಿವೃತ್ತಿ ಆಗಲಿದ್ದೇನೆ ಎಂಬುದಾಗಿ ಕರಾರುವಾಕ್ ಆಗಿಯೂ ಹೇಳಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ನಿವೃತ್ತಿ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ.
ನನ್ನ ರಾಜಕೀಯ ಜೀವನಕ್ಕೆ 50 ವರ್ಷ ಆಗುತ್ತಿದೆ. ಇನ್ನು ಒಂದೂವರೆ ವರ್ಷಕ್ಕೆ ಸಂಸದ ಅವಧಿ ಕೂಡ ಮುಕ್ತಾಯವಾಗುತ್ತದೆ. ಅಲ್ಲಿಗೆ ನಾನು ನಿವೃತ್ತಿ ಆಗುತ್ತೇನೆ ಎಂಬುದಾಗಿ ಹೇಳಿರುವ ಶ್ರೀನಿವಾಸಪ್ರಸಾದ್, ಇನ್ನು ಒಂದೂವರೆ ವರ್ಷದಲ್ಲಿ ನಿವೃತ್ತರಾಗಲಿರುವುದನ್ನು ಘೋಷಿಸಿದ್ದಾರೆ.
ಜನತಾ ಪಕ್ಷದಿಂದ 1977ರಲ್ಲಿ ಸ್ಪರ್ಧಿಸಿ ಗೆದ್ದ ನಾನು, ಇದುವರೆಗೆ 14 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ಆ ಪೈಕಿ 11 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇನೆ. ನನಗೆ ನ್ಯಾಷನಲ್ ಎಕ್ಸ್ಪೋಸರ್ ಸಿಕ್ಕಿದೆ. ಸಂಸತ್ತು ಜಗತ್ತಿನ ಪ್ರಜಾಪ್ರಭುತ್ವದ ಬಹುದೊಡ್ಡ ಕೇಂದ್ರ. ಸ್ಥಾಯಿಸಮಿತಿಗಳ ಮೂಲಕ ದೇಶದ ಪ್ರವಾಸ ಮಾಡಿದ್ದೇನೆ ಎಂಬುದಾಗಿ ಅವರು ಹೇಳಿದ್ದಾರೆ.
ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮನವರಿಕೆ ಮಾಡಿಕೊಂಡಿದ್ದೇನೆ. ಜಾತಿಯತೆ, ಅಸ್ಪೃಶ್ಯತೆ ಹೇಗೆ ನಮ್ಮನ್ನು ಕೊಲ್ಲುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಸ್ಪೃಶ್ಯತೆಯ ಹಿಂಸೆ ಕೇಳಿದರೆ ಬೇರೆಯವರಿಗೆ ರಕ್ತ ಕುದಿಯುತ್ತದೆ. ಇನ್ನು ಅನುಭವಿಸುವವರ ಕತೆ ಏನಾಗಬೇಡ? ಅಸ್ಪೃಶ್ಯತೆ ಮಾನಸಿಕ ರೋಗ. ಹಿಂದೂ ಧರ್ಮದ ಅಸಮಾನತೆ ವಿರುದ್ಧ ಹೋರಾಡಲು ಸಾಧ್ಯವಾಗದೆ ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಸೇರಿದರು. ನಮಗೆ ಧಾರ್ಮಿಕ ವಿಮೋಚನೆ ನೀಡಿದರು ಎಂಬುದಾಗಿ ಶ್ರೀನಿವಾಸ್ಪ್ರಸಾದ್ ಹೇಳಿದರು.
ರೂಪಾಯಿ ಕುಸಿತವಾಗುತ್ತಿಲ್ಲ, ಡಾಲರ್ ಸಶಕ್ತವಾಗುತ್ತಿದೆ: ಹಣದುಬ್ಬರವನ್ನು ಹೀಗೆ ಸಮರ್ಥಿಸಿಕೊಂಡ ವಿತ್ತಸಚಿವೆ