ಮೈಸೂರು: ಲೋಕಸಭಾ ಚುನಾವಣೆ ಸಂದರ್ಭ ಧಾರ್ಮಿಕ ಹಾಗೂ ಕೌಟುಂಬಿ ಕಾರ್ಯಕ್ರಮಗಳನ್ನು ನಡೆಸಲು ಯಾವುದೇ ಅನುಮತಿಯ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.
ನೀತಿ ಸಂಹಿತೆ ಜಾರಿಯಾದ ನಂತರ ಸಾಕಷ್ಟು ಜನರು ಧಾರ್ಮಿಕ ಹಾಗೂ ಕೌಟುಂಬಿಕ ಕಾರ್ಯಕ್ರಮಗಳಿಗೆ (ಮದುವೆ, ಗೃಹ ಪ್ರವೇಶ, ದೇವರ ಪೂಜೆ, ಇತ್ಯಾದಿ) ಅನುಮತಿ ನೀಡುವಂತೆ ಅರ್ಜಿ ಸಲ್ಲಿಸುತ್ತಿದ್ದಾರೆ. ನಿಯಮದ ಪ್ರಕಾರ ಧಾರ್ಮಿಕ ಹಾಗೂ ಕೌಟುಂಬಿಕ ಕಾರ್ಯಕ್ರಮಗಳಿಗೆ ಯಾವುದೇ ಅನುಮತಿಯ ಅವಶ್ಯಕತೆ ಇಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಧಾರ್ಮಿಕ ಹಾಗೂ ಕೌಟುಂಬಿಕ ಕಾರ್ಯಕ್ರಮ ನಡೆಸುವವರು ಮಾಹಿತಿಯನ್ನು ಸಂಬಂಧಿಸಿದ ಸಹಾಯಕ ಚುನಾವಣಾಧಿಕಾರಿಗಳಿಗೆ ಅಥವಾ ಸ್ಥಳೀಯ ಪ್ರಾಧಿಕಾರಗಳಿಗೆ ತಿಳಿಸಿದರೆ ಸಾಕು. ಆದರೆ, ಮಾದರಿ ನೀತಿ ಸಂಹಿತೆ ಜಾರಿ ಸಂಬಂಧ ನಿಯೋಜಿಸಿರುವ ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವೇಲೆನ್ಸ್ ತಂಡದವರು ಕಾರ್ಯಕ್ರಮದ ಪರಿಶೀಲನೆಗೆ ಬಂದಾಗ ಕಡ್ಡಾಯವಾಗಿ ಸಹಕರಿಸಬೇಕು. ರಾಜಕೀಯ ಪಕ್ಷಗಳು ಕಾರ್ಯಕ್ರಮ ನಡೆಸಲು ಕಡ್ಡಾಯವಾಗಿ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.