ಚಿತ್ರದುರ್ಗ: ಕಠಿಣ ಪರಿಶ್ರಮ, ಏಕಾಗ್ರತೆ, ನಿರಂತರ ಅಧ್ಯಯನದಿಂದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ತಾಲೂಕಿನ ಸಿದ್ದಾಪುರದ ನೂತನ್ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವಿಜ್ಞಾನ ಚಿತ್ರಮಾಲಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶವನ್ನು ತರಬೇಕಿದೆ. ಸತತ ಅಭ್ಯಾಸದೊಂದಿಗೆ ಹೆಚ್ಚಿನ ಅಂಕಗಳೊಂದಿಗೆ ಈ ಪರೀಕ್ಷೆಯಲ್ಲಿ ಪಾಸಾದರೆ ಶಾಲೆ, ಪಾಲಕರು ಹಾಗೂ ಜಿಲ್ಲೆಗೆ ಕೀರ್ತಿ ತರಲು ಸಾಧ್ಯ ಎಂದರು.
ವಿಜ್ಞಾನ ವಿಷಯ ಪರಿವೀಕ್ಷಕ ಗೋವಿಂದಪ್ಪ ಮಾತನಾಡಿ, ಡಾ.ಕೆ.ಎನ್.ಮಹೇಶ್ ಸಿದ್ಧಪಡಿಸಿರುವ 30 ಚಿತ್ರಗಳಿರುವ ಈ ಮಾಲಿಕೆ ವಿದ್ಯಾರ್ಥಿಗಳಿಗೆ ನೆರವಾಗಲಿದೆ ಎಂದು ಹೇಳಿದರು.
ಗಣಿತ ವಿಷಯ ಪರಿವೀಕ್ಷಕ್ಷಿ ಸವಿತಾ ಮಾತನಾಡಿ, ಗಣಿತ ಕಬ್ಬಿಣದ ಕಡಲೆ ಎಂಬ ಭಾವನೆಯಿಂದ ಮೊದಲು ಹೊರ ಬರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶಾಲೆ ಕಾರ್ಯದರ್ಶಿ ರಾಘವೇಂದ್ರ, ಎಂ.ಆರ್.ನಾಗರಾಜ್, ರಮೇಶ್ರೆಡ್ಡಿ, ಕೀರ್ತಿಕುಮಾರ್, ಡಾ.ಕೆ.ಎನ್.ಮಹೇಶ್, ಶ್ರೀಧರ್, ಜಂಪಣ್ಣ, ಹಾಲೇಶ್, ಬಸವಂತ್ಕುಮಾರ್, ಕೃಷ್ಣಮೂರ್ತಿ ಮತ್ತಿತರ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಇದ್ದರು.