ಮೊಳಕಾಲ್ಮೂರು: ವಿಶ್ವವನ್ನೇ ತಲ್ಲಣಗೊಳಿಸಿರುವ ಕರೊನಾ ವೈರಸ್ ಭೀತಿ ನಡುವೆಯೂ ಸೋಮವಾರ ಪಟ್ಟಣದಲ್ಲಿ ಯುಗಾದಿ ಹಬ್ಬದ ಸಂತೆ ಜೋರಾಗಿ ನಡೆಯಿತು.
ವೈರಸ್ ತಡೆ ಹಿನ್ನೆಲೆಯಲ್ಲಿ ಪ್ರತಿ ಬುಧವಾರ ನಡೆಯಬೇಕಿದ್ದ ವಾರದ ಸಂತೆಯನ್ನು ರದ್ದುಗೊಳಿಸಲಾಗಿತ್ತು. ಅಂದು ಸಂತೆಗೆ ಬಂದಿದ್ದ ಜನ, ವ್ಯಾಪಾರಿಗಳು ಚಿಂತೆಗೀಡಾಗಿ ಬಂದ ದಾರಿಗೆ ಸುಂಕವಿಲ್ಲದೆ ಹಿಂದಿರುಗಿದ್ದರು.
ಯುಗಾದಿ ಹಬ್ಬದ ಕಾರಣ ಸೋಮವಾರ ಸಂತೆ ನಡೆಯಬಹುದೆಂದು ಬಹಳಷ್ಟು ಜನ ಪಟ್ಟಣದಲ್ಲಿ ಜಮಾವಣೆಗೊಂಡಿದ್ದರು. ಅಂಗಡಿ ಮುಂಗಟ್ಟುಗಳ ಮುಂದೆ ನಿಂತು ಬಾಗಿಲು ತೆಗೆಯುವುದನ್ನೇ ಕಾದು ಕುಳಿತಿದ್ದರು.
ಈ ವಿಷಯ ತಿಳಿದ ವ್ಯಾಪಾರಸ್ಥರು ಅಂಗಡಿ ಬಾಗಿಲು ತೆಗೆದು ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಿ ದುಪ್ಪಟ್ಟು ಲಾಭ ಮಾಡಿಕೊಂಡರು. ಬಟ್ಟೆ, ದಿನಸಿ, ಕಿರಾಣಿ, ತರಕಾರಿ ಇನ್ನಿತರ ಅಂಗಡಿಗಳನ್ನು ತೆರೆಯಲಾಗಿತ್ತು. ಜನ ಮುಗಿಬಿದ್ದು ಅಗತ್ಯ ವಸ್ತುಗಳನ್ನು ಖರೀದಿಸಿ ತಮ್ಮೂರಿನತ್ತ ಹೆಜ್ಜೆ ಹಾಕಿದರು.