ಮುಂಬೈ: ತನ್ನ ಮೂವರು ಪುತ್ರಿಯರ ಮೇಲೆ ಹೆತ್ತ ಅಪ್ಪನೇ ಅತ್ಯಾಚಾರ ಮಾಡಲು ಪರೋಕ್ಷವಾಗಿ ಸಹಕರಿಸಿದ ಆರೋಪ ಹೊತ್ತಿರುವ ಆ ಮಕ್ಕಳ ತಾಯಿಗೆ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಖಾಜಿ ಎಂಬ ಗ್ರಾಮದ ನಿವಾಸಿಯೊಬ್ಬ ತನ್ನ ಇಬ್ಬರು ಪುತ್ರಿಯರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ. ಅಪ್ಪನ ಕೃತ್ಯವನ್ನು ಅಮ್ಮನ ಬಳಿ ಹೇಳಿಕೊಂಡರೆ ಅದನ್ನು ಯಾರೊಬ್ಬರಿಗೂ ತಿಳಿಸದಂತೆ ಮಕ್ಕಳನ್ನು ಹೊಡೆದು-ಬಡಿದು ಹೆದರಿಸುತ್ತಿದ್ದಳು. ಆದರೆ, ಮೂರನೇ ಪುತ್ರಿಯ ಮೇಲೆ ಅಪ್ಪ ಅತ್ಯಾಚಾರ ಎಸಗಲು ಯತ್ನಿಸಿದಾಗ ದೊಡ್ಡ ರಾದ್ಧಾಂತವೇ ನಡೆದು ಹೋಗಿತ್ತು.
ಇದರಿಂದ ಹೆದರಿದ ಅವರ ಅಪ್ಪ ಮತ್ತು ಅಮ್ಮ, ಮೂವರು ಮಕ್ಕಳನ್ನು ಚೆನ್ನಾಗಿ ಥಳಿಸಿ ಕೋಣೆಯಲ್ಲಿ ಕೂಡಿಹಾಕಿದ್ದರು ಎನ್ನಲಾಗಿದೆ. ಆದರೆ, ಅಪ್ಪನಿಂದ ಅತ್ಯಾಚಾರದ ಯತ್ನಕ್ಕೆ ಒಳಗಾಗಿದ್ದ ಹಿರಿಮಗಳು ತನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿ, ಪರಿಸ್ಥಿತಿಯನ್ನು ವಿವರಿಸಿದ್ದಳು ಎನ್ನಲಾಗಿದೆ. ಅವರು ಪೊಲೀಸರೊಂದಿಗೆ ಬಂದು ಮೂವರನ್ನೂ ರಕ್ಷಿಸಿದ್ದರು. ಏ.2ರಂದು ಆಕೆ ತನ್ನ ಅಪ್ಪ ಮತ್ತು ಅಮ್ಮನ ವಿರುದ್ಧ ಖಾಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಇದನ್ನೂ ಓದಿ: ಕದಿರೇಗೌಡನಪಾಳ್ಯದಲ್ಲಿ ತಹಸೀಲ್ದಾರ್ ಅಂತ್ಯಕ್ರಿಯೆ ; ಸರ್ವೇ ವೇಳೆ ಹತ್ಯೆಗೀಡಾಗಿದ್ದ ಅಧಿಕಾರಿ
ಈ ಆಘಾತಕಾರಿ ಘಟನೆಯನ್ನು ವಿವರಿಸಿರುವ ಮುಂಬೈ ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ಕಂಕನ್ವಾಡಿ, ಪುತ್ರಿಯರ ಮೇಲೆ ಅತ್ಯಾಚಾರ ಎಸಗಿರುವ ಅಪ್ಪ ಒಂದು ಶಾಲೆಯ ಮುಖ್ಯೋಪಧ್ಯಾಯನಾಗಿದ್ದಾನೆ. ಇಂಥವನು 2012ರಲ್ಲೇ ತನ್ನ ಹಿರಿಯ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಪುತ್ರಿ ತಾಯಿಯ ಬಳಿ ದೂರು ಹೇಳಿಕೊಂಡಾಗ ಆಕೆಗೆ ಚೆನ್ನಾಗಿ ಥಳಿಸಿದ್ದ ತಾಯಿ, ಯಾರೊಬ್ಬರ ಬಳಿಯೂ ಬಾಯಿ ಬಿಡದಂತೆ ತಾಕೀತು ಮಾಡಿದ್ದಳು. ಅಲ್ಲದೆ ಈಗ 18 ವರ್ಷದವಳಾಗಿರುವ ಈಕೆಯ ತಂಗಿ 5ನೇ ತರಗತಿಯಲ್ಲಿ ಓದುತ್ತಿರುವಾಗ ಆಕೆಯ ಮೇಲೆ ಅಪ್ಪ ಅತ್ಯಾಚಾರ ಎಸಗಿದ್ದ. ಆತ ಅತ್ಯಾಚಾರ ಎಸಗಿದಾಗಲೆಲ್ಲ ಮಕ್ಕಳನ್ನು ಹೊಡೆದುಬಡಿದು, ಯಾರಿಗೂ ಹೇಳದಂತೆ ತಾಯಿ ತಾಕೀತು ಮಾಡುತ್ತಿದ್ದಳು ಎಂದು ಹೇಳಿದ್ದಾರೆ.
ಇದೀಗ 20 ವರ್ಷದವಳಾಗಿರುವ ಹಿರಿಯ ಮಗಳ ಮೇಲೆ ಮಾ.31ರಂದು ಅತ್ಯಾಚಾರ ಎಸಗಲು ನೀಚ ಅಪ್ಪ ಯತ್ನಿಸಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಮೂವರು ಪುತ್ರಿಯರನ್ನು ಹೊಡೆದು-ಬಡಿದು ಕೋಣೆಯಲ್ಲಿ ಕೂಡಿ ಹಾಕಲಾಗಿತ್ತು. ಹಿರಿಯ ಮಗಳ ಸ್ನೇಹಿತರು ಬಂದು ಏ.2ರಂದು ಅವರೆಲ್ಲರನ್ನೂ ರಕ್ಷಿಸಿದ್ದರು ಎಂದು ತಿಳಿಸಿದ್ದಾರೆ.
ಆದರೆ ಈಗ ಪುತ್ರಿಯರು ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಆದ್ದರಿಂದ, ನನಗೆ ಜಾಮೀನು ಕೊಡಿ ಎಂದು ಇದೀಗ ಜೈಲಿನಲ್ಲಿರುವ ಆ ಮಕ್ಕಳ ತಾಯಿ ಅರ್ಜಿ ಸಲ್ಲಿಸಿದ್ದಾಳೆ. ಆದರೆ, ಆಕೆ ಸಾಕ್ಷ್ಯ ನಾಶಪಡಿಸುವ ಮತ್ತು ಮಕ್ಕಳ ಮೇಲೆ ಪ್ರಭಾವ ಬೀರಲು ಯತ್ನಿಸುವ ಸಾಧ್ಯತೆ ಇರುವುದರಿಂದ ಆಕೆಯ ಅರ್ಜಿಯನ್ನು ತಿರಸ್ಕರಿಸುತ್ತಿರುವುದಾಗಿ ಹೇಳಿದ್ದಾರೆ.
ಇದು ಹೃದಯದ ವಿಷ್ಯವೋ ಶಿಷ್ಯ, ಕೋವಿಡ್-19ರಿಂದ ಏನಾಗ್ತಿದೆ ನೋಡೋ ಮನುಷ್ಯ!