ಬೆಂಗಳೂರು: ಕಳೆದ ವರ್ಷದ ಗಾಂಧಿ ಜಯಂತಿಯ ಸಂದರ್ಭದಲ್ಲೇ “ಮೋಹನದಾಸ’ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ ಪ್ರಯತ್ನಿಸಿದ್ದರು. ಅದು ಸಾಧ್ಯವಾಗಿರಲಿಲ್ಲ. ಈ ವರ್ಷ ಅದು ಸಾಧ್ಯವಾಗುತ್ತಿದೆ. ಗಾಂಧಿ ಜಯಂತಿಯ ಮುನ್ನಾ ದಿನ, ಅಂದರೆ ಅ.1ರಂದು “ಮೋಹನದಾಸ’ ಚಿತ್ರ ಬಿಡುಗಡೆಯಾಗುತ್ತಿದೆ.
“ಮೋಹನದಾಸ’ ಚಿತ್ರದ ಬಗ್ಗೆ ಮಾತನಾಡುವ ಪಿ. ಶೇಷಾದ್ರಿ, “ಗಾಂಧಿ ಅವರ ಕುರಿತು ಭಾರತೀಯ ಚಿತ್ರರಂಗದಲ್ಲಿ ಎರಡು ಪ್ರಮುಖ ಚಿತ್ರಗಳು ಬಂದಿವೆ. ಒಂದು ರಿಚರ್ಡ್ ಅಟೆನ್ಬರೋ ನಿರ್ದೇಶನದ “ಗಾಂಧಿ’. ಇನ್ನೊಂದು ಶ್ಯಾಮ್ ಬೆನೆಗಲ್ ಅವರ “ದಿ ಮೇಕಿಂಗ್ ಆ್ ಮಹಾತ್ಮ’. ನಮ್ಮ ಈ ಚಿತ್ರ ಯಾಕೆ ವಿಭಿನ್ನವಾಗುತ್ತದೆ ಎಂದರೆ, ಇದು ಮಹಾತ್ಮರ ಕುರಿತಾದ ಚಿತ್ರವಲ್ಲ. ಅವರ ಬಾಲ್ಯದ ಕುರಿತಾದ ಚಿತ್ರ. 7ರಿಂದ 14 ವರ್ಷಗಳ ಜೀವನದ ಕುರಿತಾದ ಚಿತ್ರ. ಈ ಏಳು ವರ್ಷಗಳು ಅವರಿಗೆ ಏನು ಕಲಿಸಿತು ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ಬೋಳವಾರು ಮೊಹಮ್ಮದ್ ಕುಂಯಿ ಅವರ “ಪಾಪು ಗಾಂಧಿ, ಬಾಪು ಗಾಂಧಿ ಆದ ಕಥೆ’ ಎಂಬ ಕಾದಂಬರಿಯಿಂದ ಆಧರಿಸಿದೆ’ ಎನ್ನುತ್ತಾರೆ ಶೇಷಾದ್ರಿ.
“ನಾನು ಈ ಚಿತ್ರ ಮಾಡಿ 2 ವರ್ಷ 3 ತಿಂಗಳಾಗಿವೆ. ಎರಡು ವರ್ಷಗಳ ಹಿಂದೆ ಎರಡು ಪ್ರದರ್ಶನ ಆಯೋಜಿಸುವುದಕ್ಕೆ ಸಾಧ್ಯವಾಯಿತು. ಈ ಎರಡೂ ಪ್ರದರ್ಶನಗಳಿಂದ ಎಂಟು ಸಾವಿರ ಮಕ್ಕಳು ಚಿತ್ರವನ್ನು ನೋಡಿದ್ದಾರೆ. ಈ ಚಿತ್ರವನ್ನು ಇನ್ನಷ್ಟು ಮಕ್ಕಳಿಗೆ ತಲುಪಿಸಬೇಕು ಎಂಬುದು ನನ್ನ ಆಸೆ. ಕನಿಷ್ಠ ನೂರು ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಆಸೆ ಇದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ’ ಎನ್ನುತ್ತಾರೆ.
“ಮೋಹನದಾಸ’ ಚಿತ್ರದಲ್ಲಿ ಗಾಂಧಿಯ ಬಾಲ್ಯದ ಪಾತ್ರವನ್ನು ಸ್ಟಾರ್ಟ್ ಅಪ್ ಸಲಹೆಗಾರ ರವಿಶಂಕರ್ ಮತ್ತು ನಟಿ ದೀಪಾ ರವಿಶಂಕರ್ ಪುತ್ರ ಪರಂಸ್ವಾಮಿ ಮತ್ತು ಸಮರ್ಥ್ ಹೊಂಬಾಳ್ ನಿರ್ವಹಿಸಿದ್ದಾರೆ. ಮಿಕ್ಕಂತೆ ಅನಂತ್ ಮಹದೇವನ್, ಶ್ರುತಿ, ದತ್ತಣ್ಣ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಜಿ.ಎಸ್. ಭಾಸ್ಕರ್ ಅವರ ಛಾಯಾಗ್ರಹಣ ಮತ್ತು ಪ್ರವಿಣ್ ಗೋಡ್ಖಿಂಡಿ ಸಂಗೀತ ಸಂಯೋಜಿಸಿದ್ದಾರೆ.