ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸಂಜೆ ಶಿವಮೊಗ್ಗದ ಬೂತ್ ಅಧ್ಯಕ್ಷೆ ಸರಳಾ ಅವರನ್ನು ಆಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿಸಿ ಲೋಕಸಭಾ ಚುನಾವಣೆ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು.
8ನೇ ವಾರ್ಡ್ನ 37ನೇ ಬೂತ್ ಅಧ್ಯಕ್ಷೆ, ವಿನೋಬನಗರ ವೀರಣ್ಣ ಲೇಔಟ್ ನಿವಾಸಿ ಸರಳಾ ಅವರೊಂದಿಗೆ ಕೆಲ ನಿಮಿಷ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಿದರು. ಸರಳಾ ತಮ್ಮನ್ನು ಪರಿಚಯಿಸಿಕೊಂಡು ಬೂತ್ನಲ್ಲಿ ಮಾಡುತ್ತಿರುವ ಕೆಲಸದ ಬಗ್ಗೆ ಮೋದಿಗೆ ಮಾಹಿತಿ ನೀಡಿದರು. ಇದೇ ವೇಳೆ ಪ್ರತಿ ಮನೆಗೂ ತೆರಳಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿ ಕೊಡುವಂತೆ ಪ್ರಧಾನಿ ಸಲಹೆ ನೀಡಿದರು.
ಖುದ್ದು ಪ್ರಧಾನಿಯೇ ಫೋನ್ ಮಾಡಿ ಚುನಾವಣೆ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದ ಬಗ್ಗೆ ಸರಳಾ ಸಂತಸ ವ್ಯಕ್ತಪಡಿಸಿದರು. ಇದೊಂದು ಅಪೂರ್ವ ಸಂದರ್ಭವಾಗಿತ್ತು. ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದೇ ನಮ್ಮ ಪುಣ್ಯ ಎಂದು ಸಂಭ್ರಮಿಸಿದರು.