ಬಳ್ಳಾರಿ: ಸಮಾಜದ ಸಾಮರಸ್ಯ ಕದಡಿರುವ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿಕೆಗೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸೋಮಶೇಖರರೆಡ್ಡಿ ಅವರನ್ನು ಬಂಧಿಸಬೇಕೆಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ಶಾಸಕ ಸೋಮಶೇಖರರೆಡ್ಡಿ ಹಾಗೂ ಸಂಸದ ತೇಜಸ್ವಿ ಸೂರ್ಯ ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡಿದ್ದಾರೆ. ಪ್ರಪಂಚದ ಭ್ರಾತೃತ್ವದ ಭಾವನೆಗಳಿಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಸ್ವಾಮಿ ವಿವೇಕಾನಂದ ವಿಚಾರಧಾರೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರು ಪೌರತ್ವ ತಿದ್ದುಪಡಿ ಕಾಯ್ದೆ ಬದಲಿಗೆ ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಜಾಗೃತಿ ಅಭಿಯಾನ ನಡೆಸಲಿ ಎಂದು ಸಲಹೆ ನೀಡಿದರು.
ದೇಶದ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ 100 ರೂ. ಗಡಿ ದಾಟುವ ಸಾಧ್ಯತೆಯಿದೆ. ತಾಳಿಗೂ ಚಿನ್ನ ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಪಾಲಿನ ಜಿಎಸ್ಟಿ ಹಣ, ಉದ್ಯೋಗ ಖಾತ್ರಿ ಅನುದಾನ ನೀಡುತ್ತಿಲ್ಲ. ನೆರೆ ಪರಿಹಾರ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಕಾಲು ಹಿಡಿದುಕೊಳ್ಳುವುದು ಬಾಕಿ ಇದೆ. ನೆರೆ ಪರಿಹಾರ ನೀಡುವ ಶಕ್ತಿಯೂ ಕೇಂದ್ರ ಸರ್ಕಾರಕ್ಕೆ ಇಲ್ಲ. ಕರ್ನಾಟಕ ಭಿಕ್ಷೆ ಕೇಳುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಮುಕ್ತ ಭಾರತ ದೂರ ಇಲ್ಲ. ನಾಥೂರಾಮ್ ಗೋಡ್ಸೆ ಮನಸ್ಥಿತಿಯ ಸಂಘಟನೆಗಳು ಜೆಎನ್ಯು ಮೇಲೆ ದಾಳಿ ನಡೆಸಿವೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿದರು. ಕೆಪಿಸಿಸಿ ಸದಸ್ಯ ಕಲ್ಲುಕಂಬ ಪಂಪಾಪತಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಸುಂಡಿ ನಾಗರಾಜಗೌಡ, ಡಿಸಿಸಿ ಕಾರ್ಯದರ್ಶಿ ವೆಂಕಟೇಶ ಹೆಗಡೆ, ಮುಖಂಡ ಕೊಳಗಲ್ಲು ಅಂಜಿನಿ ಇತರರಿದ್ದರು.