ಶಿಗ್ಗಾಂವಿ: ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳಿಂದ ವಂಚಿತರಾದಂತಹ 5 ವರ್ಷದೊಳಗಿನ ಎಲ್ಲ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆ ಹಾಕಲು ಮಿಷನ್ ಇಂದ್ರಧನುಷ್ 5.0 ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ಎ. ಆರ್. ಹೇಳಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ಗುರುವಾರ ಈ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ಲಸಿಕೆಯಿಂದ ವಂಚಿತವಾದ ಮಕ್ಕಳು ಮತ್ತು ಗರ್ಭಿಣಿಯರನ್ನು ಲಸಿಕೆಗೊಳಪಡಿಸುವ ಮೂಲಕ ತಾಲೂಕಿನಲ್ಲಿ ಶೇ. 100ರಷ್ಟು ಗುರಿ ಸಾಧಿಸಲು ಹೆಚ್ಚುವರಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದರು.
ತಾಲೂಕಿನ ಬಂಕಾಪುರ, ಚಂದಾಪುರ, ಕೋಣನಕೇರಿ, ದುಂಡಸಿ, ತಡಸ, ಹಿರೇಬೆಂಡಿಗೇರಿ, ಹುಲಗೂರು ಮತ್ತು ಅತ್ತಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಕ್ಕಳು ಮತ್ತು ಗರ್ಭಿಣಿಯರನ್ನು ಕರೆತಂದು ಲಸಿಕೆ ಹಾಕುವ ಕಾರ್ಯಕ್ರಮ ನಡೆಸಲಾಗುತ್ತಿದೆ. ತಾಲೂಕಿನಲ್ಲಿ 164 ಗರ್ಭಿಣಿಯರು, 0-2 ವರ್ಷದ 723 ಮಕ್ಕಳು, 2-5 ವರ್ಷದ 150 ಮಕ್ಕಳು ವಿವಿಧ ಕಾರಣಗಳಿಂದ ಲಸಿಕೆಯಿಂದ ವಂಚಿತರಾಗಿದ್ದಾರೆ. ಅವರೆಲ್ಲರನ್ನು ಇಂದು ಕೇಂದ್ರಕ್ಕೆ ಕರೆತಂದು ಲಸಿಕೆ ನೀಡುವ ಮೂಲಕ ತಾಲೂಕಿನಲ್ಲಿ ಶೇ. 100ರಷ್ಟು ಮಿಷನ್ ಇಂದ್ರಧನುಷ್ ಯೋಜನೆ ಯಶಸ್ವಿಗೊಳಿಸಲಾಗುವುದು ಎಂದರು.
ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಹನುಮಂತಪ್ಪ ಪಿ.ಎಚ್., ಡಾ.ಸುರೇಶ ಪೂಜಾರ, ಡಾ.ನೇಮಾವತಿ ಶಿವಳ್ಳಿ, ಎಸ್.ಡಿ. ಸರ್ಜಾಪುರ, ಅಶೋಕ ಅಮಾತೆಣ್ಣನವರ, ಗುರು ಹಾಗಲೂರ, ಸಿಬ್ಬಂದಿ ಇದ್ದರು.