ಗ್ವಾಲಿಯರ್: ಕರೊನಾ ಹಿನ್ನೆಲೆಯಲ್ಲಿ ಮಾಸ್ಕ್ ತೊಡುವುದು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ವೈರಸ್ ಸೋಂಕು ಹರಡದಿರಲಿ ಎಂಬ ಕಾರಣಕ್ಕೆ. ಆದರೆ ಬಹುತೇಕ ಆಚರಣೆಗಳು ತಮ್ಮ ಮೂಲ ಉದ್ದೇಶವನ್ನೇ ಕಳೆದುಕೊಳ್ಳುವಂತೆ, ಮಾಸ್ಕ್ ತೊಡುವುದು ಕೂಡ ಬಹಳ ಜನರಿಗೆ ಕೇವಲ ಒಂದು ನಿಯಮದಂತೆ ತೋರುತ್ತದೆ. ಹೀಗಾಗಿ, ಹಲವರು ಮಾಸ್ಕ್ಅನ್ನು ಕತ್ತಿಗೆ ತೊಟ್ಟರೆ, ಕೆಲವರು ಜೋಪಾನವಾಗಿ ಜೇಬಿನಲ್ಲಿಟ್ಟುಕೊಂಡು ಓಡಾಡುವುದೂ ಕಂಡುಬರುತ್ತದೆ!
ಮಾಸ್ಕ್ ತೊಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸ್ವಚ್ಛವಾದ ಮಾಸ್ಕ್ಅನ್ನು ತೊಡುವುದು. ಹೀಗಿರುವಾಗ ಒಬ್ಬರು ಬಳಸಿದ ಮಾಸ್ಕ್ಅನ್ನು ಮತ್ತೊಬ್ಬರು ತೊಟ್ಟರೆ ಉಪಯೋಗಕ್ಕಿಂತ ಹಾನಿಯೇ ಹೆಚ್ಚು. ಆದರೆ, ಇಂಥದ್ದೊಂದು ಪ್ರಸಂಗ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ. ಕೇಂದ್ರ ನಾಗರೀಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯ ಅವರು ಕಾರ್ಯಕ್ರಮವೊಂದಕ್ಕೆ ಹೋದ ಸಂದರ್ಭದಲ್ಲಿ, ಮಾಸ್ಕ್ ತೊಟ್ಟಿಲ್ಲದ ನಾಯಕರೊಬ್ಬರಿಗೆ ತಾವು ತೊಟ್ಟಿದ್ದ ಮಾಸ್ಕನ್ನೇ ತೆಗೆದು ತೊಡಿಸಿದ್ದಾರೆ!
ಇದನ್ನೂ ಓದಿ: ಪೆಗಾಸಸ್ ಫೋನ್ ಟ್ಯಾಪ್ ಆರೋಪದ ತನಿಖೆ ನಡೆಸಲಿದೆ, ಸುಪ್ರೀಂ ಕೋರ್ಟ್ ತಜ್ಞರ ಸಮಿತಿ
ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಈ ರೀತಿಯಾಗಿ ಬಳಸಿದ ಮಾಸ್ಕ್ ತೊಡಿಸಿಕೊಂಡವರು ಗ್ವಾಲಿಯರ್ನ ಮಾಜಿ ಸಂಸದ ಅರುಣ್ ಮಿಶ್ರ ಎಂದು ತಿಳಿದುಬಂದಿದೆ. ಡಬ್ಬಲ್ ಮಾಸ್ಕ್ ಹಾಕಿಕೊಂಡ ಸಚಿವ ಸಿಂಧ್ಯಾರನ್ನು ಸಾರ್ವಜನಿಕ ಸಮಾರಂಭವೊಂದಕ್ಕೆ ಸ್ವಾಗತಿಸುತ್ತಾ ನಿಂತಿರುವ ಹಲವು ನಾಯಕರಲ್ಲಿ ಮಿಶ್ರ ಕೂಡ ಇದ್ದರು. ಅವರು ಮಾಸ್ಕ್ ತೊಟ್ಟಿಲ್ಲದ್ದನ್ನು ನೋಡಿದ ಸಿಂಧ್ಯ, ದಿಢೀರನೇ ತಾವು ಎನ್95 ಮಾಸ್ಕ್ ಮೇಲೆ ತೊಟ್ಟಿದ್ದ ಸರ್ಜಿಕಲ್ ಮಾಸ್ಕ್ಅನ್ನು ತೆಗೆದು ತೊಡಿಸಿಬಿಟ್ಟಿದ್ದಾರೆ.
ಈ ಪ್ರಸಂಗವನ್ನು ನೋಡಿ, ವಿರೋಧ ಪಕ್ಷ ಸದಸ್ಯರು ಬಿಜೆಪಿ ಸಚಿವರ ಕಾಲೆಳೆದಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾರ್ಯಕ್ರಮಗಳನ್ನು ಮಾಡುತ್ತೀರಿ, ಬಳಸಿದ ಮಾಸ್ಕನ್ನು ಮತ್ತೊಬ್ಬ ನಾಯಕರಿಗೆ ನೀಡುತ್ತೀರಲ್ಲಾ ಎಂದು ಉದ್ಗರಿಸಿದ್ದಾರೆ. (ಏಜೆನ್ಸೀಸ್)
ಹೆಂಡತಿಗೆ ಲಸಿಕೆ ನೀಡಿದ್ದಕ್ಕೆ ನರ್ಸ್ ಮುಖಕ್ಕೆ ಪಂಚ್ ಮಾಡಿದ ಭೂಪ!
ಸಿಧು ‘ಸೂಪರ್ ಸಿಎಂ’ ಆಗಲು ಪ್ರಯತ್ನಿಸಿದರೆ ಕಾಂಗ್ರೆಸ್ಗೆ ಕುತ್ತು ಎಂದ ಕ್ಯಾಪ್ಟನ್!