ಬೆಳಗಾವಿ: ವೈಜ್ಞಾನಿಕ ಹಾಗೂ ಕಾನೂನಾತ್ಮಕವಾಗಿ ಖನಿಜ ಸಂಪನ್ಮೂಲ ಸದ್ಬಳಕೆ ಮತ್ತು ಸುರಕ್ಷಿತ ಗಣಿಗಾರಿಕೆಗೆ ಒತ್ತು ನೀಡಲು ರಾಜ್ಯದಲ್ಲಿ ಗಣಿಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ ನಿರಾಣಿ ಮಾಹಿತಿ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಅನಕ್ಷರಸ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಕ್ವಾರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಕಾನೂನು ಪಾಲನೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವೃತ್ತಿಪರತೆ, ಕಾನೂನು ಪಾಲನೆಯ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಕೋರ್ಸ್ ಆರಂಭಿಸಿ, ಶೈಕ್ಷಣಿಕ ತರಬೇತಿ ನೀಡಲು ಕ್ರಮ ಕೈಗೊಳ್ಳಲು ಸೋಮವಾರ ವಿಕಾಸಸೌಧದಲ್ಲಿ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗಿದೆ. ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ಟೋನ್ಪಾರ್ಕ್: ಮರಳು ಮತ್ತು ಕಲ್ಲು ಸೇರಿದಂತೆ ಇಲಾಖೆ ವ್ಯಾಪ್ತಿಗೊಳಪಡುವ ವಿವಿಧ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು, ಬೇಡಿಕೆ ಮತ್ತು ಪೂರೈಕೆದಾರರ ನಡುವೆ ನೇರ ಸಂಪರ್ಕ ಸಾಧಿಸಲು ರಾಜ್ಯದಲ್ಲಿ ‘ಸ್ಟೋನ್ಪಾರ್ಕ್’ ನಿರ್ಮಿಸಲಾಗುವುದು. ಈ ಪಾರ್ಕ್ ಅನ್ನು ಆರಂಭದಲ್ಲಿ ಹೆಚ್ಚು ಗಣಿಗಾರಿಕೆ ನಡೆಯುವ ಒಂದೇ ಜಿಲ್ಲೆಯಲ್ಲಿ ಆರಂಭಿಸಿ,
ಬಳಿಕ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.
ಅಕ್ರಮದ ವಿರುದ್ಧ ಕ್ರಮ: ರಾಜ್ಯಾದ್ಯಂತ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಐದು ವಿಭಾಗಗಳಲ್ಲಿ 15 ದಿನಕ್ಕೊಮ್ಮೆ ಅದಾಲತ್ ಆಯೋಜಿಸಿ, ಕಾನೂನಾತ್ಮಕ ತೊಡಕು ನಿವಾರಿಸುವುದು ಮತ್ತು ನಿಯಮಗಳಂತೆ ಗಣಿಗಾರಿಕೆ ನಡೆಸುವವರಿಗೆ ಉತ್ತೇಜಿಸಲಾಗುವುದು. ಮರಳನ್ನು 5 ವಿಧದಲ್ಲಿ ವಿಂಗಡಿಸಲಾಗಿದ್ದು, ಸ್ಥಳೀಯವಾಗಿ ಹಳ್ಳ-ಕೊಳ್ಳಗಳಲ್ಲಿ ಲಭ್ಯವಾಗುವ ಮರಳನ್ನು ಬಡ ಜನತೆಗೆ ಉಚಿತವಾಗಿ ವಿತರಿಸುವ ಕುರಿತು ಚರ್ಚೆ ನಡೆದಿದೆ. ಇದರಿಂದಾಗುವ ನಷ್ಟವನ್ನು ಬೃಹತ್ ಪ್ರಮಾಣದಲ್ಲಿ ಮರಳು ಕೊಂಡುಕೊಳ್ಳುವವರಿಂದ ಭರಿಸಿಕೊಳ್ಳಲು ಯೋಚಿಸಲಾಗಿದೆ ಎಂದರು.
ಹಟ್ಟಿ ಚಿನ್ನದ ಗಣಿಯಲ್ಲಿ ವರ್ಷಕ್ಕೆ ಕೋಟ್ಯಾಂತರ ರೂ. ಹಣವನ್ನು ವಿದ್ಯುತ್ ಖರೀದಿಗೆ ವ್ಯಯಿಸಲಾಗುತ್ತಿದೆ. ಅನಗತ್ಯ ವೆಚ್ಚ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ವಿದ್ಯುತ್ತನ್ನು ಸ್ವತಃ ಉತ್ಪಾದಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವ ನಿರಾಣಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಿರ್ದೇಶಕಿ ದೀಪಾ ಕುಡಚಿ ಇದ್ದರು.
ಹೋರಾಟ ನಿಲ್ಲಿಸಿ, ಸರ್ಕಾರದೊಂದಿಗೆ ಮಾತುಕತೆಗೆ ಬನ್ನಿ
ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಸ್ಥಾನಮಾನ ಸಿಗಲೇಬೇಕು, ಸಿಗಲಿದೆ. ದಶಕದ ಹಿಂದಿನಿಂದಲೂ ಈ ಹೋರಾಟಕ್ಕೆ ನಾನೂ ಬೆಂಬಲ ನೀಡುತ್ತಿದ್ದೇನೆ. ಇದೀಗ ಬಂದವರು ನಿತ್ಯ ಮೈಕ್ ಹಿಡಿಯುತ್ತಿದ್ದಾರೆ. ಅಂದು ಇವರೆಲ್ಲ ಎಲ್ಲಿದ್ದರು? ಹರಿಹರ ಮತ್ತು ಕೂಡಲಸಂಗಮ ಪೀಠಗಳ ಸ್ವಾಮೀಜಿಗಳು ಸಮಾಜಕ್ಕೆ ಎರಡು ಕಣ್ಣುಗಳಿದ್ದಂತೆ. ಮೀಸಲಾತಿ ವಿಚಾರವಾಗಿ ಸಮಾಜದ ಮುಖಂಡರು ಹಾಗೂ ಸ್ವಾಮೀಜಿಗಳು ಹೋರಾಟ ನಿಲ್ಲಿಸಿ, ಸರ್ಕಾರದೊಂದಿಗೆ ಮಾತುಕತೆಗೆ ಬರಬೇಕು. 2ಎ ವರ್ಗಕ್ಕೆ ಸೇರಿಸಿದರೆ ಇನ್ನುಳಿದ ವರ್ಗಗಳಲ್ಲಿ ಆಗುವ ಸಾಧಕ-ಬಾಧಕಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ. ಕಾನೂನಾತ್ಮಕವಾಗಿ ಸೂಕ್ತ ಕ್ರಮ ಕೈಗೊಳ್ಳುವವರೆಗೂ ತಾಳ್ಮೆಯಿಂದ ಇರಬೇಕು ಎಂದು ಸಚಿವ ಮುರುಗೇಶ ನಿರಾಣಿ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.