ಉತ್ತರ ಪ್ರದೇಶ: ರಷ್ಯಾ ಮೂಲದ ವೈದ್ಯಕೀಯ ವಿದ್ಯಾರ್ಥಿಯನ್ನು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಆರೋಪದಲ್ಲಿ ಸ್ನೇಹಿತನೊಂದಿಗೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಬಗ್ಗೆ ಎಸ್ಪಿ ಅರ್ಪಿತ್ ವಿಜಯ್ ವರ್ಗಿಯ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿ ರೋಹನ್ ಕುಮಾರ್ ರಷ್ಯಾದಿಂದ ಭಾರತಕ್ಕೆ ಮರಳಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ. ಆದರೆ ಅಮಿತ್ ಕುಮಾರ್ ಎಂಬಾತನೊಂದಿಗೆ ಸೇರಿಕೊಂಡು ಆನ್ಲೈನ್ ಬೆಟ್ಟಿಂಗ್ ಆಟವಾಡಿ ಕಾಲೇಜ್ ಶುಲ್ಕ ಕಟ್ಟಲು ತಂದಿದ್ದ 15 ಲಕ್ಷ ರೂ. ಕಳೆದುಕೊಂಡಿದ್ದಾನೆ.
ರೋಹನ್ನಿಂದಾಗಿ ಕಳೆದುಕೊಂಡಿದ್ದ ಹಣವನ್ನು ಮರಳಿ ಪಡೆಯಲು ಎರಡನೇ ವರ್ಷದ ಡಿ-ಫಾರ್ಮಸಿ ವಿದ್ಯಾರ್ಥಿಯೊಂದಿಗೆ ಸೇರಿಕೊಂಡ ರೋಹನ್ ತನ್ನ ನೆರೆಹೊರೆಯವರ ಮನೆಯನ್ನು ದರೋಡೆ ಮಾಡಲು ಮುಂದಾಗಿದ್ದಾನೆ.
ತನ್ನ ಯೋಜನೆಯಂತೆ ನೆರೆಮನೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ರಾಣಿ ಎಂಬುವವರ ಮನೆಯಲ್ಲಿ ಕಳ್ಳತನ ನಡೆಸಿದ್ದಾನೆ. ಶಿಕ್ಷಕಿ ಮನೆಗೆ ಹಿಂತುರಿಗಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಕೂಡಲೇ ನಗರದ ಕೊತ್ವಾಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಗುರುತಿಸಿ, ಬಂಧನಕ್ಕೆ ಬಲೆ ಬೀಸಿದ್ದಾರೆ.
ತನ್ನ ಬಂಧನಕ್ಕೆ ಪೊಲೀಸರು ಮನೆಗೆ ಬರುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ರೋಹನ್ ಕದ್ದು ತಂದಿದ್ದ ಚಿನ್ನದ ಸರವನ್ನು ನುಂಗಿದ್ದಾನೆ. ಆದರೆ ಪೊಲೀಸರು ಆತನನ್ನು ಹಿಡಿದು ಆಸ್ಪತ್ರೆಗೆ ಕರೆದೊಯ್ದಿದ್ದು ಎಕ್ಸ್ ರೇ ವರದಿ ತರಿಸಿದ್ದಾರೆ. ಈ ವೇಳೆ ರೋಹನ್ ಹೊಟ್ಟೆಯಲ್ಲಿ ಚಿನ್ನಾಭರಣ ಇರುವುದು ಪತ್ತೆಯಾಗಿದೆ. ಸದ್ಯ ಪೊಲೀಸರು ರೋಹನ್ ದೋಚಿದ ಚಿನ್ನಾಭರಣಗಳಿಗಾಗಿ ಶೋಧ ನಡೆಸಿದ್ದಾರೆ. (ಏಜೆನ್ಸೀಸ್)