More

    ವಿವಾಹಿತ ಪುತ್ರಿಗೂ ಅನುಕಂಪದ ನೌಕ್ರಿ; ಸರ್ಕಾರಿ ಉದ್ಯೋಗಕ್ಕೆ ಅರ್ಹ ಎಂದು ಹೈಕೋರ್ಟ್ ಮಹತ್ವದ ಆದೇಶ

    ಬೆಂಗಳೂರು: ಮೃತ ಸರ್ಕಾರಿ ನೌಕರನ ವಿವಾಹಿತ ಪುತ್ರಿ ಸಹ ಅನುಕಂಪದ ಉದ್ಯೋಗ ಕೋರಲು ಅರ್ಹರಾಗಿರುತ್ತಾರೆಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿವಾಹವಾದ ಕಾರಣಕ್ಕೆ ಅನುಕಂಪದ ಉದ್ಯೋಗ ನೀಡಲು ನಿರಾಕರಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಭುವನೇಶ್ವರಿ ವಿ.ಪುರಾಣಿಕ್ ಎಂಬುವವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ಸರ್ಕಾರಿ ನಿಯಮದನ್ವಯ, ಪತ್ನಿ, ಪುತ್ರ ಅಥವಾ ಅವಿವಾಹಿತ ಪುತ್ರಿ ಮಾತ್ರ ಅನುಕಂಪದ ಉದ್ಯೋಗ ಕೋರಬಹುದು; ವಿವಾಹಿತ ಪುತ್ರಿಗೆ ಅವಕಾಶವಿಲ್ಲ. ‘ಪುತ್ರನಂತೆಯೇ ಪುತ್ರಿ ಸಹ ವಿವಾಹವಾದರೂ ಪುತ್ರಿಯೇ ಆಗಿರುತ್ತಾಳೆ. ವಿವಾಹಿತ ಪುತ್ರಿ ಅನುಕಂಪದ ಉದ್ಯೋಗ ಕೋರಲು ಅರ್ಹಳಲ್ಲ ಎಂಬ ಸರ್ಕಾರದ ನಿಯಮ ಲಿಂಗ ತಾರತಮ್ಯಕ್ಕೆ ಕಾರಣವಾಗುತ್ತದೆ’ ಎಂದು ಕೋರ್ಟ್ ಹೇಳಿದೆ.

    ಲಿಂಗ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ. ಪುತ್ರನ ವೈವಾಹಿಕ ಸ್ಥಾನಮಾನ ಅನುಕಂಪದ ಉದ್ಯೋಗ ಕೋರಲು ಅರ್ಹವಾಗಿರುವಾಗ, ವಿವಾಹಿತ ಮಗಳು ಸಹ ಇದಕ್ಕೆ ಅರ್ಹಳಾಗಿರುತ್ತಾಳೆ. ಪುತ್ರ ಮತ್ತು ಪುತ್ರಿಯ ವೈವಾಹಿಕ ಸ್ಥಾನಮಾನವು ಅನುಕುಂಪದ ಉದ್ಯೋಗ ಕೋರುವುದಲ್ಲಿ ಯಾವುದೇ ವ್ಯತ್ಯಾಸ ಉಂಟುಮಾಡುವುದಿಲ್ಲ. ಪ್ರಕೃತಿಯು ಮಹಿಳೆಗೆ ಸಾಕಷ್ಟು ನೀಡುವಾಗ ಕಾನೂನು ಕಡಿಮೆ ನೀಡಲು ಸಾಧ್ಯವಿಲ್ಲ ಎಂಬುದನ್ನು ಸದಾ ನೆನಪಿನಲ್ಲಿಡಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

    ಪುತ್ರಿಯ ವಿವಾಹ ಆಕೆ ಕುಟುಂಬದ ಭಾಗವಾಗುವುದನ್ನು ತಡೆಯುವುದಿಲ್ಲ. ವಿವಾಹಿತ ಪುತ್ರ ಮಾತ್ರ ಕುಟುಂಬದ ಭಾಗವಾಗಿ ಮುಂದುವರಿಯುತ್ತಾನೆಂದು ಯಾವುದೇ ಕಾನೂನು ಊಹಿಸಲು ಸಾಧ್ಯವಿಲ್ಲ. ಮದುವೆ ಆಧಾರದ ಮೇಲೆ ಅನುಕಂಪದ ಉದ್ಯೋಗ ನಿರಾಕರಿಸಲು ಆಗುವುದಿಲ್ಲ. ಸರ್ಕಾರಿ ಉದ್ಯೋಗಿಯ ಪುತ್ರಿಯ ವಿವಾಹವು ಪಾಲಕರ ಸಾಮಾಜಿಕ ಬದ್ಧತೆಯಾಗಿರುತ್ತದೆ. ಆ ಸಾಮಾಜಿಕ ಬದ್ಧತೆಯೇ ಅನುಕಂಪದ ಉದ್ಯೋಗ ಕೋರಲು ಪುತ್ರಿಯನ್ನು ಅನರ್ಹ ಮಾಡುತ್ತದೆ ಎಂದರೆ ಒಪ್ಪಲಾಗದು. ಹೀಗಾಗಿ, ವಿವಾಹಿತ ಪುತ್ರಿಯನ್ನು ಹೊರಗಿಟ್ಟು ‘ಕುಟುಂಬ’ವನ್ನು ಅರ್ಥೈಸುವ ಮತ್ತು ವಿವಾಹಿತ ಪುತ್ರಿ ಅನುಕಂಪದ ಉದ್ಯೋಗ ಕೋರಲು ಅನರ್ಹಳು ಎಂದು ಪ್ರತಿಪಾದಿಸುವ ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದ ಮೇಲೆ ನೇಮಕಾತಿ) ಅಧಿನಿಯಮದ 1996ರ ನಿಯಮ 2(1)(ಎ)(ಐ), ನಿಯಮ 2(1)(ಬಿ) ಮತ್ತು 3 (2)(ಐ)(ಸಿ) ತಾರತಮ್ಯದಿಂದ ಕೂಡಿದ್ದು, ಸಂವಿಧಾನದ ಪರಿಚ್ಛೇದ 14 ಮತ್ತು 15ನ್ನು ಉಲ್ಲಂಘಿಸುತ್ತದೆ ಎಂದು ಕೋರ್ಟ್ ಆದೇಶಿಸಿತು.

    ಪ್ರಕರಣವೇನು?

    ಅಶೋಕ್ ಅಡಿವೆಪ್ಪ ಮಡಿವಾಳ್ ಎಂಬುವರು ಬೆಳಗಾವಿ ಜಿಲ್ಲೆಯ ಕುಡುಚಿ ಗ್ರಾಮದ ಎಪಿಎಂಸಿ ಕಚೇರಿಯಲ್ಲಿ ಕಾರ್ಯದರ್ಶಿಯಾಗಿದ್ದರು. ಕುಟುಂಬದ ನಿರ್ವಹಣೆಗೆ ಆಧಾರವಾಗಿದ್ದ ಅವರು ಸಾವನ್ನಪ್ಪಿದ್ದರು. ಇದರಿಂದ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ಕೋರಿ ಮೃತರ ಪುತ್ರಿ ಭುವನೇಶ್ವರಿ ವಿ.ಪುರಾಣಿಕ್ 2017ರ ಮೇ 22ರಂದು ಮನವಿ ಪತ್ರ ಸಲ್ಲಿಸಿದ್ದರು. ಅದನ್ನು ತಿರಸ್ಕರಿಸಿದ್ದ ಕೃಷಿ ಮಾರುಕಟ್ಟೆ ಇಲಾಖೆ ಜಂಟಿ ನಿರ್ದೇಶಕರು, ವಿವಾಹ ಆಗಿರುವುದರಿಂದ ಅನುಕಂಪದ ಉದ್ಯೋಗ ನೀಡಲಾಗದು ಎಂದು ತಿಳಿಸಿ 2017ರ ಆ.8ರಂದು ಆದೇಶಿಸಿದ್ದರು. ಈ ಆದೇಶ ರದ್ದು ಕೋರಿ ಭುವನೇಶ್ವರಿ ಹೈಕೋರ್ಟ್​ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

    ಆ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್, ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದ ಮೇಲೆ ನೇಮಕಾತಿ) ಅಧಿನಿಯಮದ 1996ರ ನಿಯಮ 2(1)(ಎ)(ಐ), ನಿಯಮ 2(1)(ಬಿ) ಮತ್ತು 3 (2)(ಐ)(ಸಿ) ಅನ್ನು ಅಕ್ರಮ ಮತ್ತು ಅಸಾಂವಿಧಾನಿಕ ಎಂದು ಘೊಷಿಸಿದೆ. ಜತೆಗೆ, ಈ ನಿಯಮಗಳಲ್ಲಿ ಅವಿವಾಹಿತ ಎಂಬ ಪದವನ್ನು ರದ್ದುಪಡಿಸುವುದರ ಜೊತೆಗೆ ಅನುಕಂಪದ ಉದ್ಯೋಗಕ್ಕಾಗಿ ಅರ್ಜಿದಾರರ ಕ್ಲೇಮನ್ನು ಮತ್ತೆ ಪರಿಗಣಿಸಬೇಕು. ಮರುಪರಿಗಣಿಸಿದ ನಂತರ ಈ ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಒಂದು ತಿಂಗಳಲ್ಲಿ ಕಾನೂನು ಪ್ರಕಾರ ಆದೇಶ ಹೊರಡಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.

    ಆದೇಶದಲ್ಲೇನಿದೆ?

    • ಪುತ್ರನಂತೆಯೇ ಪುತ್ರಿ ಸಹ ವಿವಾಹವಾದರೂ ಪುತ್ರಿಯೇ ಆಗಿರುತ್ತಾಳೆ
    • ಲಿಂಗ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.
    • ಪುತ್ರ ಮತ್ತು ಪುತ್ರಿಯ ವೈವಾಹಿಕ ಸ್ಥಾನಮಾನವು ಅನುಕುಂಪದ ಉದ್ಯೋಗ ಕೋರುವುದರಲ್ಲಿ ಯಾವುದೇ ವ್ಯತ್ಯಾಸ ಉಂಟು ಮಾಡುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts