ಬೆಂಗಳೂರು: ಮ್ಯಾಟ್ರಿಮೊನಿಯಲ್ಲಿ ಪರಿಚಯವಾದ ಯುವಕ ವಿವಾಹ ವಾಗುವುದಾಗಿ ನಂಬಿಸಿ 3.90 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿ ಆಡುಗೋಡಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.
ಲಕ್ಕಸಂದ್ರದ ನಿವಾಸಿ ಮುಬಾರ್ಷಿನ್ (40) ವಂಚನೆಗೊಳಗಾದ ಮಹಿಳೆ. ಮುಬಾರ್ಷಿನ್ ವಿಧವೆಯಾಗಿದ್ದು, ಮರು ವಿವಾಹವಾಗಲು ಜೀವನ್ ಸಾಥಿ ಡಾಟ್ಕಾಮ್ ಮ್ಯಾಟ್ರಿಮೊನಿಯಲ್ಲಿ ವಿವರ ಹಾಕಿದ್ದರು. ಕಳೆದ ಡಿ.23ರಂದು ಮ್ಯಾಟ್ರಿಮೊನಿಯಲ್ಲಿ ಅರ್ಮನ್ ಮಾಲಿಕ್ ಎಂಬಾತನ ಪರಿಚಯವಾಗಿತ್ತು. ತಾನು ವಿದೇಶದಲ್ಲಿದ್ದು, ಭಾರತಕ್ಕೆ ಬಂದು ವಿವಾಹವಾಗುವುದಾಗಿ ತಿಳಿಸಿದ್ದ.
ಡಿ.30ರಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳ ಹೆಸರಿನಲ್ಲಿ ಮುಬಾರ್ಷಿನ್ ಮೊಬೈಲ್ಗೆ ಕರೆ ಬಂದಿತ್ತು. ಅರ್ಮನ್ ಮಾಲಿಕ್ ದೊಡ್ಡ ಪ್ರಮಾಣದ ಡೈಮಂಡ್ ಮತ್ತು ಲಗೇಜ್ ಹೊಂದಿದ್ದು, ವಶಪಡಿಸಿಕೊಂಡಿದ್ದೇವೆ. ಕೂಡಲೇ ದಂಡದ ಹಣ ಪಾವತಿಸಿದರೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.
ಅರ್ಮನ್ ಮಾಲಿಕ್ ತೊಂದರೆಯಲ್ಲಿರಬಹುದು ಎಂದುಕೊಂಡ ಮುಬಾರ್ಷಿನ್, ಕರೆ ಮಾಡಿದ ವ್ಯಕ್ತಿಗಳು ನೀಡಿದ ಬ್ಯಾಂಕ್ ಖಾತೆಗೆ ಹಂತಹಂತವಾಗಿ 3.90 ಲಕ್ಷ ರೂ. ಜಮೆ ಮಾಡಿದ್ದರು. ನಂತರ ಅರ್ಮನ್ ಮಾಲಿಕ್ ಮೊಬೈಲ್ಗೆ ಕರೆ ಮಾಡಿದಾಗ ಸ್ವಿಚ್ಆಫ್ ಆಗಿತ್ತು. ಜ.2ರಂದು ಮುರ್ಷಿಬಾನ್ಗೆ ಮತ್ತೆ ಏರ್ಪೋರ್ಟ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ವಂಚಕರು, ನಿಮ್ಮ ಹೆಸರಿನಲ್ಲಿ ಪಾರ್ಸೆಲ್ ಬಂದಿದ್ದು, ನಮ್ಮ ಬ್ಯಾಂಕ್ ಖಾತೆಗೆ 85 ಸಾವಿರ ರೂ. ಜಮೆ ಮಾಡಿ ಪಾರ್ಸೆಲ್ ಬಿಡಿಸಿಕೊಳ್ಳುವಂತೆ ಸೂಚಿಸಿದ್ದರು. ಆಗ ಎಚ್ಚೆತ್ತುಕೊಂಡ ಮುಬಾರ್ಷಿನ್ ಹಣ ಜಮೆ ಮಾಡಿರಲಿಲ್ಲ. ಈ ಬಗ್ಗೆ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.