ಮರಿಯಮ್ಮನಹಳ್ಳಿ(ವಿಜಯನಗರ):
ಶಾಶ್ವತ ಕುಡಿಯುವ ನೀರು ಯೊಜನೆ ಜಾರಿಗೆ ಆಗ್ರಹಿಸಿ ಕರೆ ನೀಡಿರುವ ಮರಿಯಮ್ಮನಹಳ್ಳಿ ಬಂದ್ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರಿಗೆ ಬಿಸಿ ತಟ್ಟಿದೆ.
ಬಂದ್ ನಿಮಿತ್ತ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸಾರಿಗೆ ಬಸ್ ಸೇರಿದಂತೆ ಎಲ್ಲ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ ಮೂಲಕ ರವಾನಿಸುತ್ತಿದ್ದಾರೆ. ಇದರಿಂದಾಗಿ ಪಟ್ಟಣಕ್ಕೆ ಬಸ್ ಪ್ರವೇಶವಿಲ್ಲದಂತಾಗಿದೆ.
ಹೊಸಪೇಟೆ, ಹಗರಿಬೊಮ್ಮನಹಳ್ಳಿ, ದಾವಣಗೆರೆ, ಬೆಂಗಳೂರು ಮಾರ್ಗವಾಗಿ ಪರ ಊರುಗಳಿಗೆ ತೆರಳುವ ಪ್ರಯಾಣಿಕರು ಬೆಳಗ್ಗೆಯಿಂದಲೇ ಬಸ್ ಗಾಗಿ ಕಾದಿದ್ದಾರೆ.
ವಿವಿಧೆಡೆಯಿಂದ ಮರಿಯಮ್ಮನಹಳ್ಳಿ ಗೆ ಬರುವವರು ಬೈಪಾಸ್ ನಲ್ಲೇ ಇಳಿದುಕೊಳ್ಳುತ್ತಿದ್ದಾರೆ. ಪಟ್ಟಣದಲ್ಲಿ ಆಟೋ ಸಂಚಾರವೂ ಸ್ಥಗಿತಗೊಂಡಿದ್ದರಿಂದ ಜನರು ಗಂಟು, ಮೂಳೆಗಳನ್ನು ಹೊತ್ತು, ಮಕ್ಕಳು, ಮರಿ ಗಳೊಂದಿಗೆ ಕಾಲ್ನಡಿಗೆಯಲ್ಲೇ ಹೆಜ್ಜೆ ಹಾಕುತ್ತಿದ್ದಾರೆ.
ಸ್ವಯಂ ಪ್ರೇರಿತ ಬಂದ್:
ಮರಿಯಮ್ಮನಹಳ್ಳಿ ಶಾಶ್ವತ ಕುಡಿವ ನೀರಿನ ಯೋಜನೆ ಜಾರಿಗೆ ಒತ್ತಾಯಿಸಿ ಹೋರಾಟ ಸಮಿತಿ ಪಟ್ಟಣ ಬಂದ್ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ ವರ್ತಕರು ಅಂಗಡಿ ಮುಗ್ಗಟ್ಟುಗಳ ಮುಚ್ಚಿ, ಸ್ವಯಂ ಪ್ರೇರಿತವಾಗಿ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಆಟೋ ಮೂಲಕ ಬಂದ್ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು.