ಮಾನ್ವಿ: ಸರ್ಕಾರಿ ನೌಕರರಿಗೆ ಸೇವಾ ನಿವೃತ್ತಿ ನಂತರ ಹಾಗೂ ಕರ್ತವ್ಯದ ಸಮಯದಲ್ಲಿ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಯಾವುದೇ ನಿಶ್ಚಿತ ಪಿಂಚಣಿ ದೊರೆಯುವುದಿಲ್ಲ. ರಾಜ್ಯ ಸರ್ಕಾರ ಕೂಡಲೇ ಹಳೇ ಪಿಂಚಣಿ ಯೋಜನೆ ಜಾರಿ ಮಾಡಬೇಕೆಂದು ಎನ್ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ಒತ್ತಾಯಿಸಿದರು.
ಪಟ್ಟಣದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಹಳೇ ಪಿಂಚಣಿ ಯೋಜನೆಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಒಪಿಎಸ್ ಯೋಜನೆಗಾಗಿ ಸಂಘದಿಂದ ಬೆಳಗಾವಿಗೆ ಪಾದಯಾತ್ರೆ ಸೇರಿ ಹಲವು ಹೋರಾಟ ನಡೆಸುತ್ತ ಬಂದಿದ್ದರೂ ಅಧಿಕಾರದಲ್ಲಿದ್ದ ಮೂರು ಸರ್ಕಾರಗಳ ಮುಖ್ಯಮಂತ್ರಿಗಳು ಎನ್ಪಿಎಸ್ ಯೋಜನೆ ರದ್ದುಪಡಿಸಿ ಒಪಿಎಸ್ ಪಿಂಚಣಿ ವ್ಯವಸ್ಥೆ ಜಾರಿ ಮಾಡುವುದಾಗಿ ಭರವಸೆ ನೀಡಿದರೇ ವಿನಾಃ ಜಾರಿ ಮಾಡಲಿಲ್ಲ ಎಂದರು.
ರಾಜ್ಯದಲ್ಲಿ 2006ರಿಂದ ಸರ್ಕಾರಿ ಸೇವೆಗೆ ಸೇರಿರುವ ಎಲ್ಲ ಸರ್ಕಾರಿ ನೌಕರರಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ಕೂಡ ಒಪಿಎಸ್ ಪಿಂಚಣಿ ವ್ಯವಸ್ಥೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.