ಮಾನ್ವಿ: ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ತುಂಗಭದ್ರಾ ನದಿ ನೀರು ಪಕ್ಕದ ಹೊಲಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. 10-12 ದಿನಗಳಲ್ಲಿ ಕೊಯ್ಲಿಗೆ ಬರುವ ಹಂತದಲ್ಲಿದ್ದ ಭತ್ತ ಮಳೆಯಿಂದ ಸಂಪೂರ್ಣ ನೆಲಕಚ್ಚಿದೆ. ಇನ್ನು ಹತ್ತಿ, ಮೆಣಸಿನಕಾಯಿ ಬೆಳೆ ತೇವಾಂಶದಿಂದ ಕೊಳೆಯುತ್ತಿವೆ.
ಅಕಾಲಿಕ ಮಳೆಗೆ ತಾಲೂಕಿನ 55,277 ಎಕರೆ ಬೆಳೆ ನಷ್ಟವಾಗಿದೆ. 6,435 ಎಕರೆ ಭತ್ತ ನೆಲಕಚ್ಚಿದೆ. ಕೆಳಗೆ ಬಿದ್ದ ಭತ್ತದ ಬೆಳೆಗೆ ಸೂಡು ಕಟ್ಟಿ ನಿಲ್ಲಿಸಲಾಗುತ್ತಿದೆ. ಇದರಿಂದ ರೈತರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಮಳೆಗೆ ಕೆಲ ಭತ್ತ ಮೊಳಕೆಯೊಡೆದಿದೆ. ಭತ್ತಕ್ಕೆ ಉತ್ತಮ ಬೆಲೆ ಇಲ್ಲದೆ ಪರದಾಡುತ್ತಿರುವ ರೈತನಿಗೆ ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಿದೆ.
ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ನದಿ ದಂಡೆಯಲ್ಲಿನ ಬೆಳೆಗಳು ಜಲಾವೃತವಾಗಿವೆ. ಭತ್ತ ಬೆಳೆ ನೀರಿನನಲ್ಲಿ ಮುಳಗಿವೆ. ನದಿ ಪಕ್ಕದಲ್ಲಿನ ರೈತರ ಪಂಪ್ಸೆಟ್ಗಳು ನೀರು ಪಾಲಾಗಿವೆ. ಬೆಳೆ ನಷ್ಟಕ್ಕೆ ಸರ್ಕಾರ ಪ್ರತಿ ಎಕರೆಗೆ 30 ಸಾವಿರ ರೂ.ಪರಿಹಾರ ನೀಡಬೇಕು. ಹತ್ತಿ ಬೆಳೆಗಾರರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಮತ್ತು ತೊಗರಿ ಪ್ರತಿ ಎಕರೆಗೆ 15 ಸಾವಿರ ರೂ. ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.