ನವದೆಹಲಿ: ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಸಿಎಎ ವಿರೋಧದ ಹೋರಾಟದಲ್ಲಿ ಯುವಕನೊಬ್ಬನಿಂದ ನಡೆದ ಗುಂಡಿನ ದಾಳಿ ರಾಜಕೀಯ ತಿರುವುಗಳನ್ನು ಪಡೆದುಕೊಂಡಿದೆ. ಈ ದುಷ್ಕೃತ್ಯದ ಹಿಂದೆ ಎಎಪಿ ಕೈವಾಡವಿರಬೇಕು ಅಥವಾ ಆತ ಶಹೀನ್ ಬಾಗ್ನಿಂದ ಬಂದವನೇ ಆಗಿರಬೇಕು ಎಂದು ಬಿಜೆಪಿ ನಾಯಕ ಮನೋಜ್ ತಿವಾರಿ ವ್ಯಂಗ್ಯವಾಡಿದ್ದಾರೆ.
ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಏಕಾಏಕಿ ಯುವಕನೊಬ್ಬ ಬಂದೂಕಿನೊಂದಿಗೆ ನುಗ್ಗಿ ಗುಂಡನ್ನು ಹಾರಿಸಿದ್ದ. ಪೊಲೀಸರ ಸಮ್ಮುಖದಲ್ಲೇ ಈ ದುಷ್ಕೃತ್ಯ ನಡೆದಿದ್ದರಿಂದ ಇದರ ಹಿಂದೆ ಕೇಂದ್ರಾಡಳಿತ ಪಕ್ಷವಾದ ಬಿಜೆಪಿಯ ಕೈವಾಡವಿದೆ ಎಂದು ವಿರೋಧ ಪಕ್ಷದವರು ಆರೋಪ ನಡೆಸುತ್ತಿದ್ದರು. ಇದೀಗ ಬಿಜೆಪಿ ಈ ಆರೋಪವನ್ನು ತಳ್ಳಿ ಹಾಕಿದ್ದು, ಇದರಲ್ಲಿ ವಿರೋಧ ಪಕ್ಷದವರದ್ದೇ ಕೈವಾಡವಿದೆ ಎಂದು ಆರೋಪಿಸಿದೆ. ಈ ಕುರಿತಾಗಿ ಮಾತನಾಡಿರುವ ದೆಹಲಿಯ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, “ಆ ಯುವಕ ಎಎಪಿ ಕಾರ್ಯಕರ್ತ ಆಗಿರಬೇಕು ಅಥವಾ ಶಹೀನ್ ಬಾಗ್ನಿಂದ ಬಂದವನೇ ಆಗಿರಬೇಕು. ಸಿಎಎ ವಿರೋಧದ ಪ್ರತಿಭಟನೆಗೆ ವ್ಯಾಪಕ ಪ್ರತಿಕ್ರಿಯೆ ದೊರಕುತ್ತಿಲ್ಲ, ಅದಕ್ಕಾಗಿ ಅವರು ಈ ರೀತಿಯ ತಂತ್ರಗಳನ್ನು ಮಾಡುತ್ತಿದ್ದಾರೆ.” ಎಂದು ಮಾಧ್ಯಮದೆದುರು ದೂರಿದ್ದಾರೆ.
ಗುಂಡಿನ ದಾಳಿ ನಡೆಸಿರುವ ಯುವಕನನ್ನು ಪೊಲೀಸರು ನ್ಯಾಯಾಂಗ ಬಂಧನದಲ್ಲಿರಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ. ಯುವಕನ ಫೇಸ್ಬುಕ್ ಖಾತೆಯನ್ನು ನೋಡಿದಾಗ ಮೇಲ್ನೋಟಕ್ಕೆ ಯುವಕ ಬಲ ಪಂಥದ ಬೆಂಬಲಿಗನಂತೆ ಕಂಡು ಬಂದಿದ್ದಾನೆ. ಯುವಕನ ಫೇಸ್ಬುಕ್ ಪ್ರೊಫೈಲ್ ಫೋಟೋದಲ್ಲಿ ಬಿಜೆಪಿಯ ಸ್ಕಾರ್ಫ್ ಹಾಕಿಕೊಂಡಿರುವುದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. (ಏಜೆನ್ಸೀಸ್)