ಭರತ್ ಶೆಟ್ಟಿಗಾರ್, ಮಂಗಳೂರು
ಹವಾಮಾನ ಇಲಾಖೆ ಕ್ಯಾಲೆಂಡರ್ ಪ್ರಕಾರ ಸೆ.30ಕ್ಕೆ ಮುಂಗಾರು ಮಳೆ ಅವಧಿ ಮುಗಿದಿದೆಯಾದರೂ, ರಾಜ್ಯದ ಬಹುತೇಕ ಕಡೆ ಮುಂಗಾರು ಮಾರುತಗಳ ಪ್ರಭಾವ ಇನ್ನಷ್ಟೇ ಕಡಿಮೆಯಾಬೇಕಿದೆ. ಪ್ರಸ್ತುತ ಸುರಿಯುತ್ತಿರುವುದು ಮುಂಗಾರಿನ ಕೊನೇ ಹಂತದ ಮಳೆ. ಮಳೆ ಕಡಿಮೆಯಾಯಿತು ಎನ್ನುವಷ್ಟರಲ್ಲೇ ವಾಯುಭಾರ ಕುಸಿತವೂ ಹೆಚ್ಚಿನ ಮಳೆಗೆ ಸಾಥ್ ನೀಡಿ, ಕರಾವಳಿಯಲ್ಲಿ ಸಾಕಷ್ಟು ಹಾನಿ ಉಂಟುಮಾಡಿದೆ.
ಕರಾವಳಿ, ಅದರಲ್ಲೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ಭಾರಿ ಮಳೆಯಾಗಿದೆ. ರಾಜ್ಯ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿ ಅಂಶ ಪ್ರಕಾರ ಅ.1ರಿಂದ 17ರವರೆಗೆ ದ.ಕ. ಜಿಲ್ಲೆಯಲ್ಲಿ ಸುರಿಯಬೇಕಾದ ವಾಡಿಕೆ ಮಳೆ 1.67 ಸೆಂ.ಮೀ. ಪ್ರಸ್ತುತ 3.35 ಸೆಂ.ಮೀ. ಮಳೆಯಾಗಿದೆ. ಇದು ಶೇ.100ರಷ್ಟು ಹೆಚ್ಚು. ಉಡುಪಿ ಜಿಲ್ಲೆಯಲ್ಲಿ ವಾಡಿಕೆಯ 1.47 ಸೆಂ.ಮೀ. ಸುರಿಯಬೇಕಾದಲ್ಲಿ 2.65 ಸೆಂ.ಮೀ. ಮಳೆಯಾಗಿದೆ. 96.8 ಮಿ.ಮೀ ವಾಡಿಕೆ ಮಳೆಯ ಪೈಕಿ 1.42 ಸೆಂ.ಮೀ. ಮಳೆಯಾಗಿದ್ದು, ಶೇ.47ರಷ್ಟು ಹೆಚ್ಚು ಸುರಿದಿದೆ.
ಹಿಂದೆ ಸರಿಯುತ್ತಿದೆ ಮುಂಗಾರು: ಕಳೆದ ವರ್ಷವೂ ಅಕ್ಟೋಬರ್ ಆರಂಭದ ದಿನಗಳಲ್ಲಿ ಮಳೆ ಸ್ವಲ್ಪ ಜೋರಾಗಿದ್ದು, ಅಕ್ಟೋಬರ್ 18ರವರೆಗೂ ಸುರಿದಿತ್ತು. ಈ ವರ್ಷವೂ ಅದೇ ರೀತಿ ಇದೆ. ಅ.28ಕ್ಕೆ ಮುಂಗಾರು ಮಾರುತಗಳು ಸಂಪೂರ್ಣ ಹಿಂದಕ್ಕೆ ಸರಿದಿದ್ದು, ಅ.30ರಿಂದ ಸಾಮಾನ್ಯ ಹಿಂಗಾರು ಆರಂಭವಾಗಿತ್ತು. ಇನ್ನೊಂದೆಡೆ ಮುಂಗಾರು ಹಿಂದಕ್ಕೆ ಸರಿಯುವ ಪ್ರಕ್ರಿಯೆಯೂ ರಾಜ್ಯದಲ್ಲಿ ಆರಂಭವಾಗಿದೆ. ಕೆಲವೇ ದಿನಗಳಲ್ಲಿ ಕರಾವಳಿ ಸಹಿತ ರಾಜ್ಯಾದ್ಯಂತ ಮುಂಗಾರು ಮಾರುತಗಳು ಹಿಂದಕ್ಕೆ ಸರಿಯಲಿವೆ. ಬಳಿಕ ಹಿಂಗಾರು ಮಾರುತದೊಂದಿಗೆ ಮತ್ತೆ ಮಳೆ ಆರಂಭವಾಗಲಿದೆ.
ಅಕ್ಟೋಬರ್ ಮಳೆ ಹೋಲಿಕೆ
ಜಿಲ್ಲೆ ಸುರಿದ ಮಳೆ (2020) ಸುರಿದ ಮಳೆ (ಅ.17ರ ವರೆಗೆ)
ದ.ಕ. 4.08 ಸೆಂ.ಮೀ. 3.35 ಸೆಂ.ಮೀ.
ಉಡುಪಿ 3.69 ಸೆಂ.ಮೀ. 2.65 ಸೆಂ.ಮೀ.
ಉ.ಕ 2.05 ಸೆಂ.ಮೀ. 1.42 ಸೆಂ.ಮೀ.
ಕರ್ನಾಟಕದ ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಾತ್ರ ಮುಂಗಾರು ಮಾರುತಗಳ ಹಿಂದಕ್ಕೆ ಸರಿದಿವೆ. ಆದರೆ ಕರಾವಳಿ ಸೇರಿದಂತೆ ದಕ್ಷಿಣ ಒಳನಾಡಿನ ಎಲ್ಲೆಡೆ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಇನ್ನೂ ಮುಂಗಾರು ಮಾರುತಗಳು ಬೀಸುತ್ತಿವೆ. ಎರಡು ಮೂರು ದಿನದಲ್ಲಿ ಮಾರುತಗಳು ಸಂಪೂರ್ಣವಾಗಿ ಹೋಗಲಿದ್ದು, ಬಳಿಕ ಹಿಂಗಾರಿನ ಆಗಮನವಾಗಲಿದೆ.
ಸುನೀಲ್ ಗಾವಸ್ಕರ್ ಕೆಎಸ್ಎನ್ಡಿಎಂಸಿ ವಿಜ್ಞಾನಿ