ಮಂಗಳೂರು: ಮಂಗಳೂರು ಸಜೀವ ಬಾಂಬ್ ಪತ್ತೆ ಪ್ರಕರಣ ಸಂಬಂದ ಪಟ್ಟಂತೆ ಪೊಲೀಸರು ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ವ್ಯಕ್ತಿ ಬಗ್ಗೆ ತೀವ್ರ ಶೋಧ ನಡೆಸಿರುವ ಪೊಲೀಸರು, ನೂರಾರು ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರಿನಿಂದ ಏರ್ಪೋರ್ಟ್ಗೆ ಹೋಗುವ ರಸ್ತೆಯ ಬದಿಗಳಲ್ಲಿ ಸಿಸಿ ಕ್ಯಾಮರಾದ ವಿಡಿಯೋಗಳನ್ನು ವಶಕ್ಕೆ ಪಡೆಯಲಾಗಿದೆ. ಬಾಂಬ್ ಇಟ್ಟು ಕಾವೂರು ಬಳಿ ಬಸ್ನಿಂದ ಇಳಿದಿರುವ ವ್ಯಕ್ತಿ ಬಗ್ಗೆ ವಿಚಾರಣೆ ನಡೆಸಿದ್ದು, ಕೆಲ ಆಟೋ ಚಾಲಕರನ್ನು ವಿಚಾರಣೆ ನಡೆಸಿದ್ದಾರೆ.
ಪೊಲೀಸರಿಂದ ಹಲವು ಮಂದಿಯ ವಿಚಾರಣೆ ನಡೆಸಿದ್ದು, ನಿನ್ನೆ ಬೆಳಗ್ಗೆ ಶಂಕಿತ ವ್ಯಕ್ತಿ ಸಂಚರಿಸಿದ ಬಸ್, ಆಟೋ ಚಾಲಕನ ವಿಚಾರಣೆ ನಡೆಸಿದ್ದಾರೆ. ಸಜೀವ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ಎನ್ಐಅ ಅಧಿಕಾರಿಗಳು ಮಂಗಳೂರಿಗೆ ಭೇಟಿ ನೀಡಿದ್ದಾರೆ. 4 ಮಂದಿ ಅಧಿಕಾರಿಗಳ ತಂಡ ಮಂಗಳೂರಿಗೆ ಆಗಮಿಸಿದ್ದು ತಪಾಸಣೆ ನಡೆಸುತ್ತಿದ್ದಾರೆ.
ವಿಮಾನ ನಿಲ್ದಾಣ, ಕೆಂಜಾರು ಪ್ರದೇಶವನ್ನು ಪರಿಶೀಲಿಸಲಿರುವ ಎನ್ಐಅ ಅಧಿಕಾರಿಗಳು, ಬಾಂಬ್ ಸ್ಫೋಟಿಸಿದ ಸ್ಥಳವನ್ನೂ ಪರಿಶೀಲನೆ ನಡೆಸಲಿದ್ದಾರೆ. ಕೆಂಜಾರು ಪ್ರದೇಶದಲ್ಲಿ ಬಾಂಬ್ ಸ್ಫೋಟಗೊಂಡ ತೀವ್ರತೆಗೆ ಮರಳಿನ ಗೋಣಿ ಚೀಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮರಳಿನ ಗೋಣಿಚೀಲಗಳ ಮಧ್ಯಭಾಗದಲ್ಲಿ ಇರಿಸಿದ್ದ ಬಾಂಬ್ ಸ್ಫೋಟಿಸಲಾಗಿತ್ತು.
ಭದ್ರತಾ ತಂಡ ಬಾಂಬ್ ವಶಕ್ಕೆ ಪಡೆದು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿತ್ತು. ಬಾಂಬ್ ನಿಷ್ಕ್ರಿಯಗೊಳಿಸಿದ ಸ್ಥಳದಲ್ಲಿರುವ ಅವಶೇಷಗಳ ಪರಿಶೀಲನೆ ಕೂಡ ನಡೆಸಲಾಗುತ್ತದೆ. ಬಾಂಬ್ನ ಅವಶೇಷಗಳನ್ನು ಎಫ್ಎಸ್ಎಲ್ ತಜ್ಞರು ಸಂಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್)