ಮುಂಬೈ: ಆನ್ಲೈನ್ನಲ್ಲಿ ಖರೀದಿ ಮಾಡುವಾಗ ಎಷ್ಟೊಂದು ಜಾಗರೂಕರಾಗಿ ಇರಬೇಕು ಎಂದು ಸರ್ಕಾರಗಳು ಹೇಳುತ್ತಲಿದ್ದರೂ, ಮಾಧ್ಯಮದಲ್ಲಿ ಮೋಸಹೋದವರ ಬಗ್ಗೆ ಅನೇಕ ಸುದ್ದಿಗಳು ಬರುತ್ತಿದ್ದರೂ, ಮೋಸ ಹೋಗುವವರ ಸಂಖ್ಯೆಯಂತೂ ಕಮ್ಮಿ ಆಗುತ್ತಿಲ್ಲ.
ಅದರಲ್ಲಿಯೂ ಲಾಕ್ಡೌನ್ ಸಮಯದಲ್ಲಿ ಆನ್ಲೈನ್ ಫುಡ್ ಡೆಲಿವರಿಗೆ ಭಾರಿ ಬೇಡಿಕೆ ಬಂದಿತ್ತು. ಅಂತೆಯೇ ಆನ್ಲೈನ್ ಮೋಸಗಾರರೂ ಬಲೆ ಬೀಸಲು ಸಾಕಷ್ಟು ಸಂಖ್ಯೆಯಲ್ಲಿ ಕಾಯುತ್ತಲೇ ಇದ್ದರು. ಅಂಥವರ ಬಲೆಗೆ ಬಿದ್ದ ಮುಂಬೈನ ಉದ್ಯಮಿಯೊಬ್ಬರು ಇದೀಗ 2.25 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಅದೂ ಎರಡು ಪ್ಯಾಕೆಟ್ ಕುರುಂಕುರುಂ ತಿನಿಸಿಗಾಗಿ!
ಇದನ್ನೂ ಓದಿ: ಲಾಕ್ಡೌನ್ ಮಹಿಮೆ: ಮದುವೆ ಸ್ಥಳಕ್ಕೆ ಮದುಮಗ ಕೊಟ್ಟ ಹೀಗೊಂದು ಡಿಫರೆಂಟ್ ಎಂಟ್ರಿ!
ದಿನಸಿ ಅಂಗಡಿಗೆ ಬೇಕಾಗುವ ಸಾಮಾನುಗಳು ಯಾವ ವೆಬ್ಸೈಟ್ನಲ್ಲಿ ಸಿಗುತ್ತದೆ ಎಂದು ತಡಕಾಡಿದ ಈ ಉದ್ಯಮಿಯ ಗಮನಕ್ಕೆ ಬಂದದ್ದು ಅನೇಕ ಮಂದಿ ಸರ್ಚ್ ಮಾಡಿದ್ದ ಒಂದು ವೆಬ್ಸೈಟ್. ಸರಿ ಅದಕ್ಕೆ ಲಾಗಿನ್ ಆದರು. ಅಲ್ಲಿ ಅವರಿಗೆ ಬೇಕಾದ ಎಲ್ಲ ಪದಾರ್ಥಗಳೂ ಇದ್ದವು. ಇದರಿಂದ ಖುಷಿಗೊಂಡ ಉದ್ಯಮಿ, ತಮಗೆ ಬೇಕಾಗಿರುವ ಎಲ್ಲ ಪದಾರ್ಥಗಳನ್ನು ಆರ್ಡರ್ ಮಾಡಿದರು.
ಸರಿ. ಅವರು ಆರ್ಡರ್ ಮಾಡಿದಂತೆ ಮನೆಗೆ ನಿಗದಿತ ಸಮಯದಲ್ಲಿ ಪದಾರ್ಥಗಳು ಮನೆಯನ್ನು ತಲುಪಿದವು. ಖುಷಿಯಲ್ಲಿ ಇವರು ಪದಾರ್ಥಗಳನ್ನು ತೆರೆದು ನೋಡಿದಾಗ ಅದರಲ್ಲಿ ಅವರು ಆರ್ಡರ್ ಮಾಡಿದ್ದ ಎರಡು ಪ್ಯಾಕೆಟ್ ಕುರುಂಕುರುಂ ತಿನಿಸಾದ ‘ಭುಜಿಯಾ’ ಇರಲಿಲ್ಲ.
ಇದನ್ನೂ ಓದಿ: ಲಾಕ್ಡೌನ್ ಎಫೆಕ್ಟ್: ದಂಪತಿ ನಡುವೆ ಹೆಚ್ಚಿದ ಸರಸ- ಸಲ್ಲಾಪಕ್ಕೆ ವಿಶ್ವ ಸಂಸ್ಥೆ ಬೆಚ್ಚಿ ಬಿದ್ದದ್ದೇಕೆ?
ಅದಕ್ಕೆ ಈಗಾಗಲೇ ಹಣ ಸಂದಾಯ ಮಾಡಿದ್ದ ಕಾರಣ, ತಾವು ಖರೀದಿಸಿರುವ ವೆಬ್ಸೈಟ್ ಮಳಿಗೆಯ ಹೆಲ್ಪ್ಲೈನ್ಗೆ ಕರೆ ಮಾಡುವ ಸಲುವಾಗಿ ಪುನಃ ಗೂಗಲ್ ಮೊರೆ ಹೋದರು. ಅದರಲ್ಲಿ ಅನೇಕ ಮಂದಿ ಹುಡುಕಾಟ ನಡೆಸಿದ್ದ ನಂಬರ್ ಸಿಕ್ಕಿತು. ಸರಿ, ಅದಕ್ಕೇ ಕರೆ ಮಾಡಿದರು. ಭುಜಿಯಾ ಪ್ಯಾಕೆಟ್ ಬಗ್ಗೆ ವಿಚಾರಿಸಿದರು. ನಂತರ ಅತ್ತ ಕಡೆಯಿಂದ ಒಂದೊಂದೇ ಮಾಹಿತಿಗಳನ್ನು ಕೇಳಲಾಯಿತು. ಭುಜಿಯಾ ಪ್ಯಾಕೆಟ್ ಶೀಘ್ರದಲ್ಲಿ ತಲುಪಿಸುತ್ತೇವೆ ಎಂದಿತು ಅತ್ತ ಕಡೆಯ ದನಿ. ಅದರಂತೆ, ಬ್ಯಾಂಕ್ ವಿವರ ಸೇರಿದಂತೆ ಕೆಲವೊಂದು ಮಾಹಿತಿಗಳನ್ನು ಕೇಳಲಾಯಿತು.
ಭುಜಿಯಾ ಪ್ಯಾಕೆಟ್ ಕನಸು ಕಾಣುತ್ತಿದ್ದ ಈ ಉದ್ಯಮಿ ತಮ್ಮ ಪಿನ್ ನಂಬರ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನೂ ನೀಡಿದರು. ಅಷ್ಟೇ… ಸ್ವಲ್ಪ ಸಮಯದಲ್ಲಿಯೇ ಭುಜಿಯಾ ಬರುತ್ತದೆ ಎಂದು ಕಾದಿದ್ದರೆ, ಫೋನ್ಗೆ ಒಂದು ಮೆಸೇಜ್ ಬಂತು. ಅದನ್ನು ನೋಡಿದರೆ ಅವರ ಬ್ಯಾಂಕ್ ಖಾತೆಯಿಂದ 2.25 ಲಕ್ಷ ರೂಪಾಯಿಗಳನ್ನು ಕಳುವು ಮಾಡಲಾಗಿತ್ತು! ತಲೆ ಸುತ್ತಿದಂತಾದ ಉದ್ಯಮಿ ಕೂಡಲೇ ಅದೇ ನಂಬರ್ಗೆ ಕಾಲ್ ಮಾಡಿದರೆ ಸ್ವಿಚ್ ಆಫ್.
ಇದನ್ನೂ ಓದಿ: ದಿನಸಿ ತರಲು ಕಳುಹಿಸಿದರೆ ಹೊಸ ಹೆಂಡತಿಯನ್ನೂ ಕರೆತರುವುದೆ? ಮಗ ರಾಕ್, ಅಮ್ಮ ಶಾಕ್!
ತಡ ಮಾಡದೇ ಪೊಲೀಸರಲ್ಲಿ ದೂರುದಾಖಲು ಮಾಡಿದರು. ಸದ್ಯ ಎಫ್ಐಆರ್ ದಾಖಲಾಗಿದೆ. ಆದರೆ ತಿಂಡಿ ಪ್ಯಾಕೆಟ್ ಕಳುಹಿಸಲು ತಮ್ಮ ವೈಯಕ್ತಿಕ ದಾಖಲೆಗಳ ಮಾಹಿತಿಯನ್ನು ಕೊಟ್ಟ ಉದ್ಯಮಿ ಮಾತ್ರ ಈಗ ಕೋರ್ಟ್ ಅಲೆದಾಡುವಂತಾಗಿದೆ! (ಏಜೆನ್ಸೀಸ್)