ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಹಳ್ಳಿಯೊಂದರ 42 ವರ್ಷದ ದಿನಗೂಲಿ ಕಾರ್ಮಿಕ ಲಾಕ್ಡೌನ್ ದಿನಗಳಲ್ಲಿ ಅದ್ದೂರಿ ಕಾರ್ಯಕ್ಕೆ ಹಣ ಖರ್ಚು ಮಾಡುವ ಅಗತ್ಯವಿಲ್ಲವೆಂದು ತನ್ನ 16 ಮತ್ತು 12 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡಲು ಪ್ರಯತ್ನಿಸಿದ್ದ ಎಂದು ಆರೋಪಿಸಲಾಗಿದೆ.
ಆದರೆ ಮಕ್ಕಳ ರಕ್ಷಣಾ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಮಧ್ಯಸ್ಥಿಕೆ ವಹಿಸಿ ವಿವಾಹ ನಡೆಯುವುದನ್ನು ತಡೆದಿದ್ದಾರೆ.
ಇದನ್ನೂ ಓದಿ: ರೆಮ್ಡೆಸಿವಿರ್: ಕಾಳದಂಧೆಯಲ್ಲಿದ್ದವರು ಅಂದರ್
ಜೂನ್ 29 ರಂದು ಈ ಘಟನೆ ನಡೆದಿದೆ. ಲಾಕ್ಡೌನ್ನಿಂದಾಗಿ ಆತನ ದೈನಂದಿನ ಆದಾಯಕ್ಕೆ ಕುಂದುಂಟಾಗಿದೆ. ಕುಟುಂಬ ನಿರ್ವಹಣೆಗಾಗಿ ಆತ ಮಾಡಿದ ಸಾಲ ಕ್ರಮೇಣ ಹೆಚ್ಚುತ್ತಿದೆ. ಇದಲ್ಲದೆ, ಮದ್ಯ ವ್ಯಸನ ಆತನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆದ್ದರಿಂದ, ಆತ ಲಾಕ್ಡೌನ್ ಮಧ್ಯೆಯೇ ಕಡಿಮೆ ಖರ್ಚಿನಲ್ಲಿ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಲು ಪ್ರಯತ್ನಿಸಿದ್ದ.
ಆತ ಪಾಲ್ವಾಲ್ ಮೂಲದ ಇಬ್ಬರು ಯುವಕರನ್ನು ನೋಡಿದ. ಆ ಯುವಕರ ಕುಟುಂಬಕ್ಕೆ ಯಾವುದೇ ವರದಕ್ಷಿಣೆ ಬೇಡಿಕೆಗಳಿರಲಿಲ್ಲ ಮತ್ತು ಸರಳವಾದ ವಿವಾಹ ಕಾರ್ಯ ನಡೆಸಲು ಅವರ ಒಪ್ಪಿಗೆ ಇತ್ತು. ನಂತರ ಎರಡು ಕುಟುಂಬಗಳು ಭೇಟಿಯಾಗಿ ಕೆಲವು ವಾರಗಳ ನಂತರ ವಿವಾಹವನ್ನು ನಡೆಸಲು ತೀರ್ಮಾನಿಸಿದ್ದರು. ಈ ಕುರಿತು ತಿಳಿದ ಕೆಲ ನೆರೆಹೊರೆಯವರು ಜೂನ್ 29 ರಂದು ಮಕ್ಕಳ ಸಹಾಯವಾಣಿಗೆ ಮಾಹಿತಿಯನ್ನು ನೀಡಿದ್ದರು.
ಇದನ್ನೂ ಓದಿ: 15 ಸಾವಿರ ರೂ. ಪಡೆದು ಅಪ್ರಾಪ್ತ ಬಾಲಕಿಗೆ ಗರ್ಭಪಾತ ಮಾಡಿ ಭ್ರೂಣವನ್ನು ಕಸದ ತೊಟ್ಟಿಗೆ ಎಸೆದ ವೈದ್ಯ
16 ಮತ್ತು 12 ವರ್ಷದ ಇಬ್ಬರು ಬಾಲಕಿಯರು ಮದುವೆಯಾಗಲಿದ್ದಾರೆಯೇ ಎಂದು ಖಚಿತಪಡಿಸಲು ಚೈಲ್ಡ್ಲೈನ್ ತಂಡ ಗ್ರಾಮಕ್ಕೆ ಬಂದಿತು. ತಮಗೆ ಮುಂದೆ ಓದುವ ಆಸೆ ಇದ್ದರೂ ತಂದೆ ತಮ್ಮ ಮದುವೆಯನ್ನು ನಿರ್ಧರಿಸಿದ್ದಾರೆ ಎಂದು ಬಾಲಕಿಯರು ಅಧಿಕಾರಿಗಳಿಗೆ ಹೇಳಿದರು. ತನ್ನ ಗಂಡ ಅಸಹಾಯಕನಾಗಿರುವುದಾಗಿ ಅವರ ತಾಯಿ ತಿಳಿಸಿದ್ದಳು. ಲಾಕ್ ಡೌನ್ ಅವಧಿಯಲ್ಲಿ ಗಂಡನ ಆದಾಯ ನಿಂತುಹೋಗಿದೆ ಮತ್ತು ಸಾಲ ಹೆಚ್ಚಾಗಿದೆ ಎಂದು ತಿಳಿದುಬಂದಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಮಕ್ಕಳ ಸಹಾಯವಾಣಿ ಅಧಿಕಾರಿಗಳು ಕುಟುಂಬದೊಂದಿಗೆ ಸಮಾಲೋಚನೆ ನಡೆಸಿದ್ದಾರೆ. 18 ವರ್ಷ ತುಂಬುವ ಮೊದಲೇ ತನ್ನ ಮಕ್ಕಳಿಗೆ ಮದುವೆ ಮಾಡುವುದಿಲ್ಲ ಎಂದು ಆ ತಂದೆ ಪೊಲೀಸರಿಗೆ ಭರವಸೆ ನೀಡಿದ್ದಾನೆ. ಮಕ್ಕಳು ಪ್ರಸ್ತುತ 6 ಮತ್ತು 9 ನೇ ತರಗತಿಯಲ್ಲಿ ಓದುತ್ತಿದ್ದಾರೆ.