ಮಹಾಲಿಂಗಪುರ: ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ಹಾಕಿಸಿಕೊಳ್ಳುವುದರಿಂದ ಜೀವಕ್ಕೆ ಯಾವುದೇ ಹಾನಿ ಹಾಗೂ ಅಡ್ಡ ಪರಿಣಾಮಗಳಿಲ್ಲ. ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆದು ಸೋಂಕು ಹರಡುವಿಕೆ ತಡೆಗಟ್ಟಲು ಮುಂದಾಗಬೇಕು ಎಂದು ಮುಧೋಳ ಟಿಎಚ್ಒ ವೆಂಕಟೇಶ ಮಲಘಾಣ ಹೇಳಿದರು.
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್ಸಿ) ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಅರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೋವಿಡ್-19 ಲಸಿಕೆ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಗರ್ಭಿಣಿಯರು, ಬಾಣಂತಿಯರು, ಟಿಬಿ, ಎಚ್ಐವಿ, ಬಿಪಿ, ಮಧುಮೇಹಗಳಂಥ ಕಾಯಿಲೆಗಳು ಇರುವವರಿಗೆ ಮಾತ್ರ ಲಸಿಕೆ ನೀಡುವಂತಿಲ್ಲ. ಕೇಂದ್ರ ಸರ್ಕಾರದ ಈ ಮಹತ್ವದ ಯೋಜನೆಯನ್ನು ಸಕಾರಗೊಳಿಸುವಲ್ಲಿ ಎಲ್ಲರೂ ಕೈಜೋಡಿಸೋಣ ಎಂದರು.
ಡಾ.ಅಜೀತ ಕನಕರಡ್ಡಿ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಡಾ.ಬಿ.ಡಿ. ಸೋರಗಾಂವಿ ಮಾತನಾಡಿ, ಈ ಲಸಿಕೆ ಶೇ.100 ರಷ್ಟು ಸುರಕ್ಷತೆ ಹೊಂದಿದೆ. ಬಂದರೆ ಸ್ವಲ್ಪ ಜ್ವರ ಬರಬಹುದು. ಇದಕ್ಕಿಂತ ಹೆಚ್ಚಿಗೆ ಏನೂ ಆಗುವುದಿಲ್ಲ. ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಲಸಿಕೆ ಬಿಡುಗಡೆಗೊಳಿಸಿದರು. ಅಂದಾಜು 90 ಜನ ಆಸ್ಪತ್ರೆ ಸಿಬ್ಬಂದಿಗೆ ಲಸಿಕೆಯನ್ನು ನೀಡಲಾಯಿತು.
ಪುರಸಭೆ ಸದಸ್ಯರಾದ ರಾಜು ಚಮಕೇರಿ, ರವಿ ಜವಳಗಿ, ಡಾ.ವಿಶ್ವನಾಥ ಗುಂಡಾ, ಡಾ.ಬಸವರಾಜ ಅಂಬಿ, ಡಾ.ಪತ್ತಾರ, ಡಾ.ಸಂಜಯ ಮುರುಗೋಡ, ಡಾ.ಮಂಜುನಾಥ ಚನ್ನಾಳ, ಶಿವಾನಂದ ಅಂಗಡಿ, ಡಾ.ಜಿ.ಎಸ್. ಗಲಗಲಿ, ಮಹೇಶ ಚಿಂಚಲಿ, ಪವಿತ್ರಾ ಕಲಾಲ, ಜಗದೀಶ ಜಕ್ಕನ್ನವರ, ಆನಂದ ಬೆಣಗಿ, ಮೋಸಿನ ಅತ್ತಾರ, ಸದಾಶಿವ ಉರಬಿನವರ, ಶಿವಾನಂದ ಮಾಮನಿ, ಮಹಾಲಿಂಗ ಗೋಣಿ, ವಿವೇಕ ಬೆಳ್ಳುಬ್ಬಿ, ಸಂಗೀತಾ ಹತ್ರೋಟೆ, ಉಮೇಶ ಜ್ಯೋಶಿ ಹಲವರು ಇದ್ದರು.