ಮಂಗಳೂರು: ‘ಸಪ್ತ ಸಾಗರದಾಚೆ ಎಲ್ಲೋ ಸುಪ್ತ ಸಾಗರ ಕಾದಿದೆ, ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ..’
– ಕವಿ ಗೋಪಾಲಕೃಷ್ಣ ಅಡಿಗರ ‘ಯಾವ ಮೋಹನ ಮುರಳಿ ಕರೆಯಿತೋ..’ ಎಂಬ ಕವನದಲ್ಲಿ ಇಂಥದ್ದೊಂದು ಸಾಲಿದೆ. ಸಪ್ತ ಸಾಗರದಾಚೆ ಎಲ್ಲೋ ಎಂಬ ಆ ಸಾಲೇ ನೂತನ ಸಿನಿಮಾವೊಂದಕ್ಕೆ ಶೀರ್ಷಿಕೆ ಆಗಿದ್ದು, ನಿರ್ಮಾಣ ಹಂತದಲ್ಲಿದೆ.
ಇದೀಗ ಇಲ್ಲಿ ಹೇಳಹೊರಟಿರುವ ವ್ಯಕ್ತಿಯ ಕಥೆಯೂ ಅಂಥದ್ದೇ. ಆದರೆ ಇದು ಸಪ್ತ ಸಾಗರದಾಚೆಗಿನದ್ದಲ್ಲ, ಬದಲಿಗೆ ಸಪ್ತ ಸುರಂಗದಾಚೆಗಿನಿದ್ದು. ಅರ್ಥಾತ್, ನೀರಿಗಾಗಿ ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದಿದ್ದಷ್ಟೇ ಅಲ್ಲ, ಆ ಮೂಲಕ ಬರೋಬ್ಬರಿ ನೀರನ್ನೂ ಪಡೆದ ಅಮೈ ಮಹಾಲಿಂಗ ನಾಯ್ಕರೇ ಈ ನೈಜ ಕಥೆಯ ಹೀರೋ. ಒಂದು ದಿನ ಇವರ ಈ ಸಾಹಸಗಾಥೆಯೇ ಸಿನಿಮಾ ಆಗಿ ಇವರ ಪಾತ್ರವೇ ಹೀರೋ ಆಗಿ ರಂಜಿಸಿದರೂ ಅಚ್ಚರಿ ಏನಿಲ್ಲ. ಆದರೆ ಇವರು ಈಗಾಗಲೇ ದೇಶಾದ್ಯಂತ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಏಕೆಂದರೆ ಈ ಸಲ ಪ್ರಕಟವಾಗಿರುವ ಭಾರತದ ಅತ್ಯುನ್ನತ ಪ್ರಶಸ್ತಿಗಳ ಪೈಕಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿಗೆ ಇದೇ ಮಹಾಲಿಂಗ ನಾಯ್ಕರು ಆಯ್ಕೆ ಆಗಿದ್ದಾರೆ.
ಕೇಂದ್ರ ಸರ್ಕಾರವು ಈ ವರ್ಷ ಪ್ರಕಟಿಸಿರುವ ಒಟ್ಟು 128 ಪದ್ಮ ಪ್ರಶಸ್ತಿಗಳ ಪೈಕಿ 4 ಪದ್ಮವಿಭೂಷಣ, 17 ಪದ್ಮಭೂಷಣ, 107 ಪದ್ಮಶ್ರೀ. ಅದರಲ್ಲೂ 107 ಪದ್ಮಶ್ರೀಗಳ ಪೈಕಿ ಕರ್ನಾಟಕದಿಂದ ಆಯ್ಕೆ ಆದವರು ಐವರು, ಆ ಐವರಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಕೇಪು ಗ್ರಾಮದ ಅಮೈ ಮಹಾಲಿಂಗ ನಾಯ್ಕ ಕೂಡ ಒಬ್ಬರು.
ಹೌದು.. ದಕ್ಷಿಣಕನ್ನಡ ಜಿಲ್ಲೆಯ ಈ ಪ್ರಗತಿಪರ ಕೃಷಿಕ ತಮ್ಮ ಕೃಷಿಗಾಗಿ ಗುಡ್ಡದಲ್ಲಿ ಏಳು ಸುರಂಗಗಳನ್ನು ಕೊರೆದು ಯಶಸ್ವಿಯಾಗಿದ್ದೇ ಇಂದು ಅವರನ್ನು ಪದ್ಮಶ್ರೀಯಂಥ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಆಗುವಂತೆ ಮಾಡಿದೆ.
75 ವಯಸ್ಸಿನ ಮಹಾಲಿಂಗ ನಾಯ್ಕ ಅವರು ಕೃಷಿ ಕಾಯಕದ ಮೂಲಕ ಸ್ವಾವಲಂಬಿ ಜೀವನ ಸಾಧ್ಯ ಎಂಬುದನ್ನು ಯುವ ಶಕ್ತಿಗೆ ತೋರಿಸಿಕೊಟ್ಟವರು. ಗುಡ್ಡಕ್ಕೆ ಏಳು ಸುರಂಗ ಕೊರೆದು ತಮ್ಮ ಎರಡು ಎಕರೆ ಕೃಷಿಗೆ ಅಗತ್ಯವಿರುವ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ವಿದ್ಯುತ್ ಬಳಕೆಯಿಲ್ಲದೆ ನೀರನ್ನು ಗುರುತ್ವಾಕರ್ಷಣೆ ಮೂಲಕ ಗಿಡಗಳಿಗೆ ನೀರುಣಿಸುವಂತೆ ಮಾಡಿದ್ದಾರೆ. 300 ಅಡಕೆ, 75 ತೆಂಗು, 200 ಬಾಳೆ ಗಿಡಗಳಿದ್ದು, ಹಟ್ಟಿಗೊಬ್ಬರ ಹಾಗೂ ಕಾಂಪೋಸ್ಟ್ ಹೊರತು ಬೇರಾವುದೇ ಗೊಬ್ಬರ ಬಳಸಿದವರಲ್ಲ. ಹಾಗಂತ ಅಂದು ಇವರು ಏಕಾಂಗಿಯಾಗಿ ಸುರಂಗ ಕೊರೆಯುವಾಗ ನಕ್ಕವರೂ ಇದ್ದರು. ಆದರೆ ಇವರು ಮಾತ್ರ ಸಪ್ತ ಸುರಂಗದಾಚೆ ಎಲ್ಲೋ ಅಂತರ್ಜಲವು ಕಾದಿದೆ ಎಂಬಂತೆ ತಮ್ಮ ಪರಿಶ್ರಮದಲ್ಲಿ ಮಗ್ನರಾಗಿದ್ದರು. ಆ ನಂತರ, ‘ಯಾವ ಮೋಹನ ಮುರಳಿ ಕರೆಯಿತು ನೀರ ತೀರಕೆ ನಿನ್ನನು..’ ಎಂಬ ಅಚ್ಚರಿ ಹಲವರದ್ದಾಗಿತ್ತು.
ಉನ್ನತ ಸಾಧಕರಿಗೆ ದೇಶದ ಸಲಾಂ: ಜ.ರಾವತ್, ಕಲ್ಯಾಣ ಸಿಂಗ್ ಪದ್ಮವಿಭೂಷಣ, ಗುಲಾಂ ನಬಿ ಆಜಾದ್ ಪದ್ಮಭೂಷಣ