ಉಡುಪಿ: ಅಧ್ಯಾತ್ಮ ಪ್ರಪಂಚಕ್ಕೆ ಆಚಾರ್ಯ ಮಧ್ವರ ಕೊಡುಗೆ ಅಪಾರ. ಆದರೆ ಆಚಾರ್ಯರು ಇದನ್ನು ಪ್ರಚಾರಕ್ಕೋಸ್ಕರ ಮಾಡದೆ ಕೇವಲ ಭಗವಂತ ಪ್ರೀತನಾಗಲಿ ಎಂಬ ಅನುಸಂಧಾನ ಹೊಂದಿದ್ದರು. ಲೋಕದ ತೃಪ್ತಿಗಿಂತ ಲೋಕೇಶನ ಪ್ರೀತಿಗಾಗಿ ಎಲ್ಲ ಕೆಲಸ ಮಾಡಿದ್ದರು. ಗ್ರಂಥ ರಚನೆ ಕರ್ತವ್ಯವೆಂದು ಭಾವಿಸಿದ್ದರು. ಅನೇಕ ಜಯಂತಿಗಳನ್ನು ಆಚರಿಸುವು ಸರ್ಕಾರ ಮಧ್ವಜಯಂತಿಯನ್ನು ಮರೆತಿರುವುದು ವಿಷಾದನೀಯ ಎಂದು ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.
ರಾಜಾಂಗಣದಲ್ಲಿ ಕೃಷ್ಣ ಮಠ, ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಮಧ್ವಜಯಂತಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಬನ್ನಂಜೆ ಗೋವಿಂದ ಪಂಡಿತಾಚಾರ್ಯರಿಂದ ರಚಿತವಾದ ಮಧ್ವಲಾವಣಿ ಗಾಯನ ನಡೆಯಿತು. ಕೃಷಿಯಲ್ಲಿ ವಿಶೇಷ ಸಾಧನೆ (ಅಳಿವಿನಂಚಿನಲ್ಲಿರುವ ಭತ್ತದ ತಳಿ ಸಂಗ್ರಹಣೆ) ಮಾಡಿದ ಮಾದರಿ ಕೃಷಿಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿ. ಕೆ.ದೇವರಾವ್ ಬಂಗಾಡಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನಿಸಲಾಯಿತು. ಕೃಷ್ಣರಾಜ ಭಟ್ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು.