ಮದ್ದೂರು: ಲಾಕ್ಡೌನ್ ಹಿನ್ನೆಲೆ ಸಂತ್ರಸ್ತ ಬಡ ಕುಟುಂಬಗಳಿಗೆ ತಲಾ ಹತ್ತು ಸಾವಿರ ರೂ.ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಹಾಗೂ ರಾಜ್ಯವನ್ನು ಮದ್ಯಪಾನ ಮುಕ್ತ ರಾಜ್ಯವನ್ನಾಗಿ ಘೋಷಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಡಿಎಸ್-4 (ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ) ಕಾರ್ಯಕರ್ತರು ತಾಲೂಕು ಕಚೇರಿಯ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಡಿ.ಎಸ್.-4 ಜಿಲ್ಲಾಧ್ಯಕ್ಷ ಮರಳಿಗ ಶಿವರಾಜು ಮಾತನಾಡಿ, ಹೂ ಬೆಳೆಗಾರರಿಗೆ ಮಾತ್ರವಲ್ಲದೆ, ತರಕಾರಿ, ಹಣ್ಣು ಮುಂತಾದ ಕೃಷಿ ಉತ್ಪನ್ನಗಳ ನಷ್ಟಕ್ಕೆ ಗುರಿಯಾದ ರೈತರ ನಷ್ಟ ಪರಿಹಾರವನ್ನು ಅಂದಾಜಿಸಿ ವೈಜ್ಞಾನಿಕ ರೀತಿಯ ಪರಿಹಾರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಚಿಂತಕ ಡಾ.ಆನಂದ್ ತೇಲ್ತುಂಬ್ಡೆ ಮತ್ತಿತರರನ್ನು ಬಂಧಿಸಿದ್ದು, ಈ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ತಹಸೀಲ್ದಾರ್ ವಿಜಯಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಡಿ.ಎಸ್-4 ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾ ಖಜಾಂಚಿ ಎಂ.ಚನ್ನೇಶ್, ತಾಲೂಕು ಅಧ್ಯಕ್ಷ ಬಿ.ಆನಂದ, ಮುಖಂಡರಾದ ನಾರಾಯಣ, ಸುಂದರ್, ಪ್ರಸನ್ನ, ಮುನಿರಾಜ, ಶಂಕರ್ ಇತರರು ಇದ್ದರು.