ಮಹಾರಾಷ್ಟ್ರ: ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ ನಗರದ ತಥಾವಾಡೆ ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ತಡರಾತ್ರಿ ಘಟನೆ ಸಂಭವಿಸಿದ್ದು, ಟ್ಯಾಂಕರ್ನಲ್ಲಿದ್ದ ಎಲ್ಪಿಜಿ ಅನಿಲ ಸೋರಿಕೆಯಿಂದಾಗಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಸಿಲಿಂಡರ್ ಇದ್ದಕ್ಕಿದ್ದಂತೆಯೇ ಸ್ಫೋಟಗೊಂಡ ಸದ್ದು ಜೋರಾಗಿ ಕೇಳಿದ್ದು, ಸುತ್ತಲೂ ನೆರೆದಿದ್ದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಇಲ್ಲಿ ಅಕ್ರಮವಾಗಿ ಸಿಲಿಂಡರ್ಗಳ ಸಾಗಾಟ ನಡೆಯುತ್ತಿತ್ತು ಎಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ. ಟ್ಯಾಂಕರ್ನಿಂದ ಸಿಲಿಂಡರ್ಗಳಿಗೆ ಅಕ್ರಮವಾಗಿ ಎಲ್ಪಿಜಿ ತುಂಬುತ್ತಿರುವ ಶಂಕೆ ಇದೆ ಎಂದು ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ನಂತರ, ಹತ್ತಿರದ ಕಾಲೇಜಿಗೆ ಸೇರಿದ ಒಂದೆರಡು ಬಸ್ಗಳಿಗೂ ಸಹ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಹತ್ತಿರದಲ್ಲೇಯಿದ್ದ ಮತ್ತಷ್ಟು ಎಲ್ಪಿಜಿ ಸಿಲಿಂಡರ್ ಟ್ಯಾಂಕರ್ಗೆ ಅದೃಷ್ಟವಶಾತ್ ಬೆಂಕಿ ತಗುಲಿಲ್ಲ.
ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ತಕ್ಷಣವೇ ನೀರಿನ ಟ್ಯಾಂಕರ್ಗಳನ್ನು ಸ್ಥಳಕ್ಕೆ ರವಾನಿಸಿ ಬೆಂಕಿ ನಂದಿಸುವ ಕಾರ್ಯ ನಡೆದಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಪಿಂಪ್ರಿ ಚಿಂಚ್ವಾಡ್ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ಅಗ್ನಿಶಾಮಕ ಸಿಬ್ಬಂದಿ ಸರಿಯಾದ ಸಮಯಕ್ಕೆ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತರಲಾಯ್ತು. ಜತೆಗೆ ಯಾರಿಗೂ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ತಿಳಿಸಿದ್ದಾರೆ.