ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದ 6ನೇ ಆರೋಪಿ ಆದಿತ್ಯ ಆಳ್ವಗೆ ಸಿಸಿಬಿ ಪೊಲೀಸರು ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಲುಕ್ಔಟ್ ನೋಟಿಸ್ ಜಾರಿ ಮಾಡಿರುವ ಬಗ್ಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಖಚಿತ ಪಡಿಸಿದ್ದು, ಆದಿತ್ಯನಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ.
ಎಫ್ಐಆರ್ ದಾಖಲಾದ ಬೆನ್ನಲ್ಲೇ ಆದಿತ್ಯ ತಲೆಮರಿಸಿಕೊಂಡಿದ್ದಾನೆ. ಈಗಾಗಲೇ ಹೆಬ್ಬಾಳದಲ್ಲಿರುವ ಆದಿತ್ಯ ಮನೆ ಹಾಗೂ ರೆಸಾರ್ಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಡ್ರಗ್ಸ್ ಪತ್ತೆಯಾಗಿದ್ದು, ರೆಸಾರ್ಟ್ ಮ್ಯಾನೇಜರ್ ರಾಮ್ ದಾಸ್ನನ್ನು ವಶಕ್ಕೆ ಪಡೆದಿದ್ದಾರೆ.
ಆದರೆ, ಸಿಸಿಬಿ ಪೊಲೀಸರಿಗೆ ಮಾತ್ರ ಆದಿತ್ಯ ಸುಳಿವು ಇನ್ನೂ ಸಿಕ್ಕಿಲ್ಲ. ಆತ ವಿದೇಶಕ್ಕೆ ಹೋಗಿ ತಲೆಮರಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಆದಿತ್ಯ ಆಳ್ವಾ ಪತ್ತೆಗೆ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್ ಮಾಫಿಯಾ ಕೇಸಿನಲ್ಲಿ ಈಗಾಗಲೇ ಸ್ಯಾಂಡಲ್ವುಡ್ನ ‘ಮಾದಕ’ ನಟಿ ರಾಗಿಣಿ ದ್ವಿವೇದಿ, ಬಹುಭಾಷಾ ನಟಿ ಸಂಜನಾ ಗಲ್ರಾನಿ ಜತೆಗೆ ಹಲವು ಡ್ರಗ್ಸ್ ಪೆಡ್ಲರ್ಗಳು ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ.
ಆದರೆ, ಆದಿತ್ಯ ಆಳ್ವ ಮಾತ್ರ ಸಿಸಿಬಿ ಪೊಲೀಸರ ಕೈಗೆ ಸಿಗದೆ ಎಸ್ಕೇಪ್ ಆಗಿದ್ದಾನೆ. ನಟಿಮಣಿಯರಿಬ್ಬರು ಸೇರಿ ಹಲವು ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈತ ಜಾಮೀನು ಅರ್ಜಿ ಸಲ್ಲಿಸುವುದನ್ನು ಬಿಟ್ಟು, ತನ್ನ ವಿರುದ್ಧದ FIR ರದ್ದು ಮಾಡುವಂತೆ ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ.
ಜಾಮೀನು ಕೇಳೋದು ಬಿಟ್ಟು, ತನ್ನ ವಿರುದ್ಧದ ಕೇಸ್ ಅನ್ನೇ ರದ್ದು ಮಾಡಿ ಎಂದ ಆದಿತ್ಯ ಆಳ್ವ