ಬೆಂಗಳೂರು: ರಾಜ್ಯದ 2 ನೇ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ.
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಧಾರವಾಡ, ಭಗವಂತ ಖೂಬಾ ಬೀದರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿ, ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ, ವಿಜಯಪುರದಲ್ಲಿ ಕಾಂಗ್ರೆಸ್ನಿಂದ ರಾಜು ಆಲಗೂರು ಸೇರಿದಂತೆ ಘಟಾನುಘಟಿಗಳು ನಾಮಪತ್ರ ಸಲ್ಲಿಸಿ ಚುನಾವಣಾ ಕಣವನ್ನು ರಂಗೇರಿಸಿದ್ದಾರೆ.
ಸೋಮವಾರ 45 ಪುರುಷ, 7 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 52 ಅಭ್ಯರ್ಥಿಗಳು .69 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಆರಂಭದಿಂದ ಈವರೆಗೆ ಒಟ್ಟು 78 ಪುರುಷ, 10 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 88 ಅಭ್ಯರ್ಥಿಗಳು 126 ನಾಮಪತ್ರ ಸಲ್ಲಿಸಿದ್ದಾರೆ.
ಎಲ್ಲಿ? ಎಷ್ಟು? ನಾಮಪತ್ರ ಸಲ್ಲಿಕೆ:
ಈವರೆಗೆ ಚಿಕ್ಕೋಡಿ 5, ಬೆಳಗಾವಿ 5, ಬಾಗಲಕೋಟೆ 6, ವಿಜಯಪುರ 5, ಕಲಬುರಗಿ 6,ರಾಯಚೂರು 3, ಬೀದರ್ 5, ಕೊಪ್ಪಳ 7, ಬಳ್ಳಾರಿ 5, ಹಾವೇರಿ 8, ಧಾರವಾಡ 6, ಉತ್ತರ ಕನ್ನಡ 7, ದಾವಣಗೆರೆ 12, ಶಿವಮೊಗ್ಗ 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಇದೇ ತಿಂಗಳ 19 ಕಡೆಯ ದಿನವಾಗಿದ್ದು, 20 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, 22 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 7 ರಂದು ಮತದಾನ ನಡೆಯಲಿದೆ.