ಲಂಡನ್: ಕರೊನಾ ವೈರಸ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ದಾರಿ ಎಂದು ಹೇಳಲಾಗುತ್ತಿದೆ. ಹಾಗಾಗಿ ಬಹುತೇಕ ಎಲ್ಲ ದೇಶಗಳಲ್ಲೂ ಲಾಕ್ಡೌನ್ ಮಾರ್ಗ ಅನುಸರಿಸಲಾಗುತ್ತಿದೆ. ಅಗತ್ಯ ಸೇವೆಗಳು, ವಸ್ತುಗಳ ಪೂರೈಕೆ ಬಿಟ್ಟರೆ ಉಳಿಂದಂತೆ ಯಾವುದೇ ಸೌಲಭ್ಯವೂ ಸಿಗುತ್ತಿಲ್ಲ. ಭಾರತದಲ್ಲೂ ಸಹ 22 ರಾಜ್ಯಗಳ, ಒಟ್ಟು 80 ಜಿಲ್ಲೆಗಳು ಲಾಕ್ಡೌನ್ ಆಗಿವೆ.
ಆದರೆ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ವಿಭಾಗದ ತಜ್ಞರು ಒಂದು ವಿಚಾರವನ್ನು ಪ್ರಸ್ತುತಪಡಿಸಿದ್ದಾರೆ. ಯಾವುದೇ ದೇಶಗಳಾಗಲೀ ಕರೊನಾ ನಿಯಂತ್ರಣಕ್ಕಾಗಿ ಸಂಪೂರ್ಣವಾಗಿ ಲಾಕ್ಡೌನ್ ಮಾಡಲು ಸಾಧ್ಯವಿಲ್ಲ. ಅದು ಪರಿಹಾರವೂ ಅಲ್ಲ. ಈ ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಅಗತ್ಯವಾಗಿ ಕೈಗೊಳ್ಳಲೇಬೇಕಾಗುತ್ತದೆ ಎಂದಿದ್ದಾರೆ.
ಸದ್ಯದ ಮಟ್ಟಿಗೆ ನಾವು ಅನಾರೋಗ್ಯಕ್ಕೆ ಒಳಗಾದವರನ್ನು, ಕರೊನಾ ತಗುಲಿರುವವರನ್ನು, ಸೋಂಕು ತಾಗಿರುವ ಶಂಕೆ ಇರುವವರನ್ನು ಗುರುತಿಸಿ, ಪ್ರತ್ಯೇಕಿಸಬೇಕು. ಹಾಗೇ, ಕರೊನಾ ಸೋಂಕಿತರ ಸಂಪರ್ಕಕ್ಕೆ ಹೋದವರನ್ನೂ ಆದಷ್ಟು ಬೇಗ ಪತ್ತೆಹಚ್ಚಿ, ಪ್ರತ್ಯೇಕ ಮಾಡಬೇಕು ಎಂದು ಡಬ್ಲ್ಯೂಎಚ್ಒನ ಆರೋಗ್ಯ ತಜ್ಞ ಮೈಕ್ ರಯಾನ್ ತಿಳಿಸಿದ್ದಾರೆ.
ಲಾಕ್ಡೌನ್ ಮಾಡುವುದು ಅಪಾಯ. ಕರೊನಾ ನಿಯಂತ್ರಣಕ್ಕೆ ಗಂಭೀರ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳದೆ, ಸಂಪೂರ್ಣ ಬಂದ್ ಮಾಡಿದರೆ ಉಪಯೋಗವಿಲ್ಲ. ಎಷ್ಟು ದಿನ ಅಂತ ಲಾಕ್ ಡೌನ್ ಮಾಡಲು ಸಾಧ್ಯ? ಅದನ್ನು ತೆಗೆಯಲೇ ಬೇಕಾಗುತ್ತದೆ. ತೆಗೆದ ತಕ್ಷಣ ಮತ್ತೆ ಕರೊನಾ ವೈರಸ್ ಹರಡುತ್ತದೆ ಎಂದಿದ್ದಾರೆ.
ಚೀನಾ ಮತ್ತು ಏಷ್ಯಾದ ಉಳಿದ ಕೆಲವು ದೇಶಗಳು, ಯುಎಸ್, ಯುರೋಪಿಯನ್ ದೇಶಗಳು ಈಗಾಗಲೇ ಲಾಕ್ಡೌನ್ ಘೋಷಿಸಿವೆ. ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಿದ್ದಾರೆ. ಶಾಲೆ, ಬಾರ್ಗಳು, ಪಬ್, ರೆಸ್ಟೋರೆಂಟ್ಗಳೆಲ್ಲ ಬಂದ್ ಮುಚ್ಚಲ್ಪಟ್ಟಿವೆ.
ಚೀನಾ, ಸಿಂಗಪೂರ ಮತ್ತು ದಕ್ಷಿಣಕೊರಿಯಾದಲ್ಲಿ ಶಂಕಿತರನ್ನು ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಯಾರನ್ನೂ ಬಿಡುತ್ತಿಲ್ಲ. ಅವರೆಲ್ಲ ಆರೋಗ್ಯ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಲಾಕ್ಡೌನ್ ಮಾಡಿಕೊಂಡಿದ್ದಾರೆ. ಉಳಿದವರೂ ಅದೇ ಮಾರ್ಗವನ್ನು ಅನುಸರಿಸಬೇಕು ಎಂದಿದ್ದಾರೆ.
ಮೊದಲು ಸೋಂಕು ಪ್ರಸರಣವನ್ನು ತಡೆಯಬೇಕು. ಅದಾದ ಬಳಿಕ ವೈರಸ್ ನಿರ್ಮೂಲನೆ ಮಾಡಬೇಕು ಎಂದು ಮೈಕ್ ರಯಾನ್ ಹೇಳಿದ್ದಾರೆ.
ಕರೊನಾ ನಿಯಂತ್ರಣಕ್ಕಾಗಿ ಈಗಾಗಲೇ ಹಲವು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಅದರಲ್ಲಿ ಒಂದು ಲಸಿಕೆಯನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ ಎಂದು ರಯಾನ್ ತಿಳಿಸಿದ್ದಾರೆ. ಆದರೆ ಅದು ಯಾವಾಗಿನಿಂದ ಲಭ್ಯವಾಗಬಹುದು ಎಂದು ನಿಖರವಾಗಿ ಹೇಳಿಲ್ಲ.
ಕರೊನಾ ವೈರಸ್ ಚೀನಾದಲ್ಲಿ ಹುಟ್ಟಿದ್ದರೂ ಅತಿಹೆಚ್ಚು ಬಾಧಿಸಿದ್ದು ಇಟಲಿಯಲ್ಲಿ. ಅಲ್ಲಿನ ಸಾವಿನ ಸಂಖ್ಯೆ ಮಿತಿಮೀರುತ್ತಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಂಡ ವಿನಃ ಬಿಟನ್ನ ಆರೋಗ್ಯ ವ್ಯವಸ್ಥೆಗೆ ಸೂಕ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್)