ಬಾಗಲಕೋಟೆ; ಕರೊನಾ ಹತ್ತಿಕ್ಕಲು ಲಾಕ್ಡೌನ್ ಮೇ 30ರವರೆಗೂ ಮುಂದುವರೆಸಬೇಕು ಎಂಬ ಅಭಿಪ್ರಾಯ ನನ್ನದು ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಹೇಳಿದರು.
ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸುವ ವಿಚಾರವಾಗಿ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಒಬ್ಬ ಸಚಿವನಾಗಿ ಮೂವತ್ತು ಜನ ಸಚಿವರು ಏನು ಹೇಳುತ್ತಾರೊ ಅದನ್ನೇ ಹೇಳುತ್ತೇನೆ. ಲಾಕ್ಡೌನ್ ಮುಂದುವರೆಸುವುದು ಸೂಕ್ತ ಎಂದು ಹೇಳಿದರು.
ನಮ್ಮ ಜಿಲ್ಲೆಯ ಹುಕ್ಕೇರಿಯಲ್ಲಿ ಜನರೇ ಖುದ್ದಾಗಿ ಲಾಕ್ ಡೌನ್ ಮಾಡುತ್ತಿದ್ದಾರೆ. ಅದಕ್ಕೆ ಪೊಲೀಸರು ಸಹಕಾರ ಕೊಡುತ್ತಿದ್ದಾರೆ. ಸರ್ಕಾರವೇ ಎಲ್ಲವನ್ನೂ ಮಾಡೋದಕ್ಕೆ ಆಗೋದಿಲ್ಲ. ಜನರು ಕೈಜೋಡಿಸಿ ಖುದ್ದಾಗಿ ಲಾಕ್ ಡೌನ್ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿವೆ ಎಂಬ ವಿಚಾರವಾಗಿ ಮಾತನಾಡಿದ ಉಮೇಶ್ ಕತ್ತಿ ಮೊದಲ ಅಲೆಯಲ್ಲಿ ಹಳ್ಳಿಗಳಲ್ಲಿ ಯಾವುದೇ ತೊಂದರೆಗಳಿರಲಿಲ್ಲ. ಗ್ರಾಮೀಣ ಭಾಗದ ಸೊಂಕಿನ ಬಗ್ಗೆ ಡಿಸಿ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ. ಹೋಮ್ ಕ್ವಾರಂಟೈನ್ ಯಾವ ರೀತಿ ಮಾಡಬೇಕು. ಸೋಂಕಿತರನ್ನು ಎಲ್ಲಿಗೆ ಸ್ಥಳಾಂತರ ಮಾಡಬೇಕೆಂದು ಚರ್ಚೆ ಮಾಡುತ್ತೇವೆ ಎಂದರು.