ನವದೆಹಲಿ: ಕರೊನಾ ವೈರಸ್ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್ಡೌನ್ ಘೋಷಿಸಿದೆ. ಇಷ್ಟಾದರೂ ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಸೋಂಕು ಹರಡುವಿಕೆ ತಡೆಗಟ್ಟಲು ಸಾಧ್ಯವಾಗುತಿಲ್ಲ. ಈ ಹಿನ್ನೆಲೆಯಲ್ಲಿ ಲಾಕ್ಡೌನ್ ಅನ್ನು ಇನ್ನಷ್ಟು ಕಾಲ ಮುಂದುವರಿಸಬೇಕು ಎಂದು ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ.
ಇದೀಗ ರಾಜ್ಯ ಸರ್ಕಾರಗಳ ಈ ಮನವಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಲಾಕ್ಡೌನ್ ಅನ್ನು ಮುಂದುವರಿಸುವ ಒಲವು ತೋರುತ್ತಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಕೂಡ ಏಪ್ರಿಲ್ 14ರ ನಂತರದಲ್ಲಿ ಲಾಕ್ಡೌನ್ ಅಂತ್ಯಗೊಳಿಸುವಂತೆ ಮಾಡುವ ಬಯಕೆ ಇದ್ದರೆ ಜನರು ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರದೊಂದಿಗೆ ಸಹಕರಿಸಬೇಕು. ಇನ್ನೊಂದು ವಾರ ಲಾಕ್ಡೌನ್ನ ನಿಯಮವನ್ನು ತುಂಬಾ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಈ ಅವಧಿಯಲ್ಲಿ ಸಹಕಾರ ವ್ಯಕ್ತವಾದರೆ, ಆದಷ್ಟು ಬೇಗ ಲಾಕ್ಡೌನ್ ಅನ್ನು ತೆರವುಗೊಳಿಸಲು ಅನುಕೂಲವಾಗುತ್ತದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಅಲ್ಲದೆ, ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ್ದ ತೆಲಂಗಾಣ ಸಿಎಂ ಚಂದ್ರಶೇಖರ ರಾವ್, ಲಾಕ್ಡೌನ್ ಅನ್ನು ಜೂನ್ವರೆಗೆ ಮುಂದುವರಿಸಬೇಕು. ಪ್ರಾಣಗಳನ್ನು ಉಳಿಸಲು ಕ್ರಮ ಕೈಗೊಳ್ಳಬೇಕು. ಆನಂತರದಲ್ಲಿ ಬೇಕಾದರೆ ಆರ್ಥಿಕ ವ್ಯವಸ್ಥೆಯನ್ನು ಪುನರುತ್ಥಾನಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದರು.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೋವಿಡ್ 19 ಉಲ್ಬಣಿಸುವ ಲಕ್ಷಣಗಳು ಗೋಚರಿಸುತ್ತಿರುವುದರಿಂದ ಕೇಂದ್ರ ಸರ್ಕಾರ ಲಾಕ್ಡೌನ್ ಅನ್ನು ಏಪ್ರಿಲ್ 14ರ ನಂತರವೂ ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಲಾಕ್ಡೌನ್ ನಡುವೆ ನಡೆಯಿತು ವಿವಾಹ: ನವ ದಂಪತಿಗೆ ಕಾದಿತ್ತು ಶಾಕ್, ಈಗ ಠಾಣೆಯಲ್ಲಿ ಲಾಕ್!