ವಿತರಣಾ ಕಾಲುವೆ ಮೂಲಕ ಕುಡಿವ ನೀರು ಪೂರೈಕೆಗೆ ಶಾಸಕ ಹೂಲಗೇರಿ ಕ್ರಮ
ಲಿಂಗಸುಗೂರು: ರಾಂಪೂರ ಏತನೀರಾವರಿ ಯೋಜನೆಯ ವಿತರಣಾ ಕಾಲುವೆ ಮೂಲಕ ಲಿಂಗಸುಗೂರು ಪಟ್ಟಣದ ಕುಡಿಯುವ ನೀರು ಸಂಗ್ರಹ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಶಾಸಕ ಡಿ.ಎಸ್.ಹೂಲಗೇರಿ ಹೂಲಗೇರಿ ಸೋಮವಾರ ಚಾಲನೆ ನೀಡಿದರು.
ಕಳೆದೆರಡು ದಶಕಗಳಿಂದ ಪುರಸಭೆ ವ್ಯಾಪ್ತಿಯ 23 ವಾರ್ಡ್ಗಳಿಗೆ ಸಮರ್ಪಕ ನೀರು ಪೂರೈಸುತ್ತಿದ್ದ ಕೆರೆಗೆ ಬೇಸಿಗೆ ವೇಳೆ ನಾರಾಯಣಪುರ ಬಲದಂಡೆ ನಾಲೆಯಿಂದ ನೀರು ತುಂಬಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ಬಲದಂಡೆ ನಾಲೆಯ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಂಡ ಪ್ರಯುಕ್ತ ಮೇ.14 ರಂದು ನೀರು ನಾಲೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಯಿತು.
ಇದರಿಂದ ಕೆರೆಯಲ್ಲಿ ಕೇವಲ 15 ದಿನಕ್ಕಾಗುವಷ್ಟು ನೀರು ಉಳಿದಿತ್ತು. ಇದಕ್ಕೆ ಪರ್ಯಾಯ ಮಾರ್ಗವಾಗಿ ಕೆರೆ ಹತ್ತಿರ ಹಾದು ಹೋಗಿರುವ ರಾಂಪೂರ ಏತನೀರಾವರಿ ಯೋಜನೆ ವಿತರಣಾ ಕಾಲುವೆಯಿಂದ ಕೆರೆಗೆ ನೀರು ತುಂಬಿಸುವ ಉದ್ಧೇಶದಿಂದ ಯೋಜನೆಯ 6 ವಿತರಣಾ ಕಾಲುವೆ, 22 ಹೊಲಗಾಲುವೆಗಳನ್ನು ಬಂದ್ ಮಾಡಿ ಪೌರಕಾರ್ಮಿಕರು ಹಾಗೂ ಜೆಸಿಬಿ ಯಂತ್ರ ಬಳಸಿ ಕಾಲುವೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಸೋಮವಾರ ಶಾಸಕ ಡಿ.ಎಸ್.ಹೂಲಗೇರಿ ವಿತರಣಾ ಕಾಲುವೆ ಮೂಲಕ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದರು.