ಲಿಂಗಸುಗೂರು: ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸುವ ಜತೆಗೆ ಷರತ್ತು ರಹಿತ ಖರೀದಿಗೆ ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ ಬಣ) ಒತ್ತಾಯಿಸಿದೆ.
ಸಹಾಯಕ ಆಯುಕ್ತ ರಾಜಶೇಖರ ಡಂಬಳಗೆ ಸೋಮವಾರ ಮನವಿ ಸಲ್ಲಿಸಿತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತ ವಿರೋಧಿ ಕಾನೂನು ತಿದ್ದುಪಡಿ ತಂದಿದ್ದು, ಇವನ್ನು ಹಿಂಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಎಂಎಸ್ಪಿ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮತ್ತು ಖರೀದಿ ಮಾಡುವುದು ಅಪರಾಧ ಎಂದು ಪಂಜಾಬ್ ಸರ್ಕಾರ ಆದೇಶ ನೀಡಿದೆ.
ಇದರಂತೆ ರಾಜ್ಯದಲ್ಲೂ ಕಾನೂನು ತರಬೇಕು. ಕೇರಳ ಸರ್ಕಾರದ ರೀತಿ ತರಕಾರಿ ಬೆಳೆಗಳಿಗೆ ಬೆಲೆ ನಿಗದಿ ಮಾಡಬೇಕು. ಕುರಿಗಾಹಿಗಳಿಗೆ ಅನುಗ್ರಹ ಯೋಜನೆ ಮುಂದುವರಿಸಬೇಕು. ಬಲದಂಡೆ ಕಾಲುವೆಗೆ ವಾರಾಬಂದಿ ಮಾಡದಂತೆ 2021ರ ಏಪ್ರಿಲ್ವರೆಗೆ ನೀರು ಹರಿಸಬೇಕು. ದಾವಣಗೆರೆ ಡಿಸಿ ಹೊರಡಿಸಿದ ಆದೇಶದಂತೆ ಭತ್ತ ಕಟಾವು ಮೆಷಿನ್ ಮಾಲೀಕರು, ಏಜೆಂಟರು ಹೆಚ್ಚಿನ ದರ ಪಡೆಯುವುದನ್ನು ತಡೆಯಬೇಕು. ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆ, ಕುಸಿದ ಮನೆಗಳ ಸಮಗ್ರ ಸಮೀಕ್ಷೆ ನಡೆಸಿ ಪರಿಹಾರ ಧನ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮುಖಂಡರಾದ ಸದಾನಂದ ಮಡಿವಾಳ, ಸೋಮಲೆಪ್ಪ, ಆದಪ್ಪ ಹಾಲ್ದಾಳ, ಬಾಷಾಸಾಬ, ಗೌಡಪ್ಪ ನೀರಲಕೇರಿ ಇತರರು ಇದ್ದರು.