ಲಿಂಗಸುಗೂರು: ಹತ್ತಿ ಫಸಲಿನ ಉತ್ಪಾದಕತೆ ಹೆಚ್ಚಿಸಲು ತಳಿಗಳ ಮಹತ್ವ ಅರಿಯುವುದು ಅಗತ್ಯವಾಗಿದೆ ಎಂದು ರಾಯಚೂರು ಕೃಷಿ ವಿವಿ ವಿಜ್ಞಾನಿ ಡಾ.ಜಯಪ್ರಕಾಶ ನಿಡಗುಂದಿ ಹೇಳಿದರು.
ಸ್ಥಳೀಯ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಹತ್ತಿ ಬೆಳೆ ನಿರ್ವಹಣೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮಳೆಯಾಶ್ರಿತ ಮತ್ತು ನೀರಾವರಿ ಪ್ರದೇಶದಲ್ಲಿ ಪ್ರತ್ಯೇಕ ತಳಿಗಳು ಹತ್ತಿ ಫಸಲಿನ ಉತ್ಪಾದಕತೆ ಹೆಚ್ಚಿಸಲು ಸೂಕ್ತವಾಗಿವೆ ಎಂದರು.
ಕೇಂದ್ರದ ಮುಖ್ಯಸ್ಥೆ ಡಾ.ವಾಣಿಶ್ರೀ ಮಾತನಾಡಿ, ಹತ್ತಿ ನಿರಂತರ ಬೇಡಿಕೆ ಇರುವ ಬೆಳೆಯಾಗಿದ್ದು, ರಾಯಚೂರು ಹತ್ತಿ ಉತ್ಪಾದನೆಯಲ್ಲಿ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಮಾರುಕಟ್ಟೆ ಹೊಂದಿದೆ. ಇತ್ತೀಚಿಗೆ ಹತ್ತಿ ಬೆಳೆ ಬಿತ್ತನೆ ಪ್ರಮಾಣ ಸ್ವಲ್ಪ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಿಜ್ಞಾನಿಗಳಾದ ಡಾ.ಶಿವಾನಂದ ಹಂಚಿನಾಳ, ಡಾ.ಬಿಂದು, ಅರವಿಂದ ರಾಠೋಡ್, ಶಂಕ್ರಪ್ಪ ಜೋಳದಡಗಿ, ಶರಣಬಸವ ಹಿರೇಉಪ್ಪೇರಿ, ರೈತರಾದ ಅಮರಣ್ಣ ಗುಡಿಹಾಳ, ಮಲ್ಲಣ್ಣ ಗೌಡೂರು, ಶರಣಪ್ಪ ಹೊಳೆಯಾಚೆ, ಶರಣಪ್ಪ ಮುಸ್ಲಿಕಾರಲಕುಂಟೆ ಇತರರು ಇದ್ದರು.