ಬಳ್ಳಾರಿ: ಎಲ್ಐಸಿ ಖಾಸಗೀಕರಣಗೊಳಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ ಎಂದು ಎಲ್ಐಸಿ ಜಂಟಿ ಕ್ರಿಯಾ ಸಮಿತಿಯ ಕಾರ್ಯದರ್ಶಿ ಟಿ.ಜಿ.ವಿಠ್ಠಲ ಹೇಳಿದರು.
ಈ ಹಿಂದೆ ಪ್ರಧಾನಿ ಮೋದಿ ಎಲ್ಐಸಿ ಖಾಸಗೀಕರಣ ಮಾಡುವುದಿಲ್ಲ ಎಂದಿದ್ದರು. ಆದರೆ, ಬಜೆಟ್ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ಆತಂಕಕಾರಿ ಸಂಗತಿ. ಸರ್ಕಾರದ ಕ್ರಮದಿಂದ ಎಲ್ಐಸಿ ಮೂಲೆ ಗುಂಪಾಗಲಿದೆ. ಕಾರ್ಪೋರೇಟ್ ಕುತಂತ್ರಕ್ಕೆ ಸರ್ಕಾರ ಮಣಿದಿರುವುದು ಖಂಡನೀಯ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಸರ್ಕಾರಿ ಸಂಸ್ಥೆಯಲ್ಲಿ ಎಲ್ಐಸಿಯಿಂದ 10 ಲಕ್ಷ ಸಾವಿರ ಕೋಟಿ ರೂ.ಹೂಡಿಕೆ ಮಾಡಲಾಗಿದೆ. 2008ರಲ್ಲಿ ಇಡೀ ವಿಶ್ವ ಆರ್ಥಿಕ ಕುಸಿತದಿಂದ ಕಂಗಾಲಾಗಿತ್ತು. ಆಗ ದೇಶದ ಆರ್ಥಿಕತೆಗೆ ಸಹಕಾರಿಯಾಗಿದ್ದು ಜೀವ ವಿಮಾ ನಿಗಮ ಎಂಬುದನ್ನು ಕೇಂದ್ರ ಸರ್ಕಾರ ಮರೆಯಬಾರದು. ಸರ್ಕಾರದ ಅವೈಜ್ಞಾನಿಕ ಕ್ರಮಗಳಿಂದ ಲಕ್ಷಾಂತರ ನೌಕರರು ಬೀದಿಗೆ ಬರಲಿದ್ದಾರೆ. ಕೂಡಲೇ ಸರ್ಕಾರ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಸಮಿತಿಯ ಸಂಚಾಲಕ ಸೂರ್ಯ ನಾರಾಯಣ, ಕಾರ್ಯದರ್ಶಿ ಅಬ್ದುಲ್ ಖದೀರ್, ಸದಸ್ಯರಾದ ಕೆ.ಶಶಿಧರ, ಎಸ್.ವೆಂಕಟೇಶ, ರಾಮದಾಸ್ ಇತರರಿದ್ದರು. ಪ್ರತಿಭಟನೆ: ಸುದ್ದಿಗೋಷ್ಠಿ ನಂತರ ನಗರದ ಎಲ್ಐಸಿ ಶಾಖಾ ಕಚೇರಿಗೆ ತೆರಳಿದ ಎಲ್ಐಸಿ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಕೇಂದ್ರ ಸರ್ಕಾರ ತೀರ್ಮಾನ ಖಂಡಿಸಿ ಪ್ರತಿಭಟನೆ ನಡೆಸಿದರು. ನೌಕರರು ಇದ್ದರು.